ಅಮಿತ್ ಶಾ, ಮೋದಿಯನ್ನು ಮಹಾಭಾರತದ ದುಶ್ಯಾಸನ, ದುರ್ಯೋಧನನಿಗೆ ಹೋಲಿಸಿದ ಸಿಎಂ ಮಮತಾ ಬ್ಯಾನರ್ಜಿ

Share with

ಕೊಲ್ಕತ್ತಾ, ಡಿಸೆಂಬರ್ 30: ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಭಯೋತ್ಪಾದಕ ಜಾಲಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೋಮವಾರ ತಮ್ಮ ಕೊಲ್ಕತ್ತಾ ಭೇಟಿಯ ವೇಳೆ ಆರೋಪಿಸಿದ್ದರು. ಇದಕ್ಕೆ ಇಂದು ತಿರುಗೇಟು ನೀಡಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾಭಾರತದ ಇಬ್ಬರು ಖಳ ನಾಯಕರಾದ ದುಶ್ಯಾಸನ ಮತ್ತು ದುರ್ಯೋಧನನಿಗೆ ಹೋಲಿಸಿದ್ದಾರೆ.

ಬಂಗಾಳದ ಬಂಕುರಾದ ಬಿರ್ಸಿಂಗ್‌ಪುರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, “ಶಕುನಿಯ ಶಿಷ್ಯ ದುಶ್ಶಾಸನ ಮಾಹಿತಿಯನ್ನು ಸಂಗ್ರಹಿಸಲು ಬಂಗಾಳಕ್ಕೆ ಬಂದಿದ್ದಾನೆ. ಚುನಾವಣೆ ಹತ್ತಿರ ಬಂದ ತಕ್ಷಣ ದುಶ್ಶಾಸನ ಮತ್ತು ದುರ್ಯೋಧನ ಇಬ್ಬರೂ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತಾರೆ” ಎಂದು ಟೀಕಿಸಿದ್ದಾರೆ. ಡಿಸೆಂಬರ್ 20ರಂದು ಪ್ರಧಾನಿ ಮೋದಿ ಬಂಗಾಳಕ್ಕೆ ಭೇಟಿ ನೀಡಿದ್ದರು. 2026ರ ಬಂಗಾಳ ಚುನಾವಣೆಗೂ ಮುಂಚಿತವಾಗಿ ಅಮಿತ್ ಶಾ ಪ್ರಸ್ತುತ ಪಶ್ಚಿಮ ಬಂಗಾಳ ರಾಜ್ಯಕ್ಕೆ 3 ದಿನಗಳ ಭೇಟಿಯಲ್ಲಿದ್ದಾರೆ.

“ಪಶ್ಚಿಮ ಬಂಗಾಳ ಭಯೋತ್ಪಾದಕರ ನೆಲೆಯಾಗಿದೆ ಎಂದಾದರೆ ಪಹಲ್ಗಾಮ್ ದಾಳಿಯನ್ನು ನಮ್ಮ ಕೇಂದ್ರ ಸರ್ಕಾರವೇ ಕಾರ್ಯಗತಗೊಳಿಸಿದೆಯೇ? ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೇ ಇಲ್ಲದಿದ್ದರೆ, ಪಹಲ್ಗಾಮ್‌ನಲ್ಲಿ ದಾಳಿ ಹೇಗೆ ನಡೆಯಿತು? ನೀವು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದೀರಾ? ದೆಹಲಿಯಲ್ಲಿ ನಡೆದ ಘಟನೆಯ ಹಿಂದೆ ಯಾರ ಕೈವಾಡವಿದೆ?” ಎಂದು ಅಮಿತ್ ಶಾ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.


Share with

Leave a Reply

Your email address will not be published. Required fields are marked *