ಬೆಳ್ತಂಗಡಿ: ಮರ ಕಡಿಯುವ ವೇಳೆ, ಕಟ್ಟಿಂಗ್ ಮೆಷಿನ್ ಕೈ ತಪ್ಪಿ ಬಿದ್ದ ಪರಿಣಾಮ ಚಾಲನಾ ಸ್ಥಿತಿಯಲ್ಲಿದ್ದ ಮೆಷಿನ್ ಗರಗಸ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಡಿ.20ರಂದು ಬೆಳ್ತಂಗಡಿಯಲ್ಲಿ ನಡೆದಿದೆ.


ಮೃತಪಟ್ಟ ವ್ಯಕ್ತಿಯನ್ನು ಸಾವ್ಯ ಗ್ರಾಮದ ಸಾವ್ಯ ಹೊಸಮನೆ ನಿವಾಸಿ ಪ್ರಶಾಂತ್ ಪೂಜಾರಿ(46) ಎಂದು ಗುರುತಿಸಲಾಗಿದೆ.
ಮನೆಗೆ ಕಟ್ಟಿಗೆ ಮಾಡುವ ಸಲುವಾಗಿ ಪ್ರಶಾಂತ್ ಅವರು ಸಹೋದರ ಪ್ರಮೋದ್ ಜೊತೆ ಸೇರಿ ಡಿ.19ರಂದು ಬೆಳಗ್ಗೆ ಕಟ್ಟಿಂಗ್ ಮಿಷಿನ್ ಮೂಲಕ ಮರ ಕಡಿಯುತ್ತಿದ್ದರು. ಈ ವೇಳೆ ಮೆಷಿನ್ ಜೊತೆಗೆ ಪ್ರಶಾಂತ್ ಹಿಡಿತ ತಪ್ಪಿ ಕೆಳಕ್ಕೆ ಬಿದ್ದಿದ್ದು ಚಾಲನಾ ಸ್ಥಿತಿಯಲ್ಲಿದ್ದ ಮೆಷಿನ್ ನ ಗರಗಸ ಆಕಸ್ಮಿಕವಾಗಿ ಕುತ್ತಿಗೆಗೆ ತಾಗಿ ಗಂಭೀರ ಗಾಯಗಳಾಗಿದೆ.
ತಕ್ಷಣ ಸ್ಥಳೀಯ ಆಸ್ಪತೆಗೆ ದಾಖಲಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸಹೋದರ ಪ್ರಮೋದ್ ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ನೀಡಿದ್ದಾರೆ.




