
ಉಪ್ಪಳ: ಬಾವಿಗೆ ಬಿದ್ದ ವ್ಯಕ್ತಿಯನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಸಂಘ ಪರಿವಾರದ ಸಕ್ರೀಯ ಕಾರ್ಯಕರ್ತ ವಿಶ್ವನಾಥ ಆಚಾರ್ಯ [೫೨] ಮೃತಪಟ್ಟಿದ್ದಾರೆ. ಜುಲೈ 29ರಂದು ಮಧ್ಯಾಹ್ನ ಮನೆಯ ಬಾವಿಗೆ ಅಕಸ್ಮಾತ್ ಬಿದ್ದಿದ್ದಾರೆ. ಕೂಡಲೇ ಉಪ್ಪಳದಿಂದ ಅಗ್ನಿಶಾಮಕ ದಳ ಹಾಗೂ ಊರವರ ಸಹಕಾರದೊಂದಿಗೆ ಗಂಭೀರ ಗಾಯಗೊಂಡಿದ್ದ ಇವರನ್ನು ಬಾವಿಯಿಂದ ಮೇಲೆಕ್ಕೆತ್ತಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಇವರು ಚಿನ್ನದ ಕೆಲಸವನ್ನು ನಿರ್ವಹಿಸುತ್ತಿದ್ದರು. ಕೈಕಂಬದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ನಲ್ಲಿ ಅಪ್ರಸರ್ ರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ಸಕ್ರೀಯರಾಗಿದ್ದು, ಭಜನೆ ಸಂಕೀರ್ತನೆಗಾರರಾಗಿದ್ದಾರೆ. ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಸದಸ್ಯ, ವಿಶ್ವವಿನಾಯಕ ಸ್ವ-ಸಹಾಯ ಸಂಘದ ಸದಸ್ಯರಾಗಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ರಾತ್ರಿ ಪುಳಿಕುತ್ತಿ ಸ್ಮಶಾನದಲ್ಲಿ ಅಂತ್ಯಸoಸ್ಕಾರ ನಡೆಯಿತು. ಮೃತರು ಪತ್ನಿ ಶಶಿಕಲಾ, ಪುತ್ರ ಶರತ್, ಸೊಸೆ ರಮ್ಯಾ, ಸಹೋದರಿಯರಾದ ಶಾರದಾ, ಅನಸೂಯ, ಪ್ರೇಮಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಪುರುಶೋತ್ತಮ ಆಚಾರ್ಯ, ತಾಯಿ ವೇದಾವತಿ, ಓರ್ವ ಸಹೋದರ ವಾಸುದೇವ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ನೇತಾರರು, ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ನಿಧನಕ್ಕೆ ಶ್ರೀ ಗೌರೀ ಗಣೇಶ ಭಜನಾ ಮಂದಿರ ಸಮಿತಿ, ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್, ಶಿವಶಕ್ತಿ ಪ್ರೆಂಡ್ಸ್ ಕ್ಲಬ್, ಸ್ವಸ್ಥಿಕ್ ಪ್ರೆಂಡ್ಸ್, ಗೌರೀ ಗಣೇಶ ಮಹಿಳಾ ಸಂಘ ಪ್ರತಾಪನಗರ ಮೊದಲಾದ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿದೆ.





