
ಮಂಗಳೂರು: ಹಲವೆಡೆ ಕಳ್ಳತನ ನಡೆಸಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಸಬಾ ಬೆಂಗ್ರೆಯ ಮೊಹಮ್ಮದ್ ಆಸಿಫ್(32) ಹಾಗೂ ಮೊಹಮ್ಮದ್ ಸಫ್ವಾನ್ (21) ಎಂದು ಗುರುತಿಸಲಾಗಿದೆ.

ಆರೋಪಿಗಳು ಪಡುಬಿದ್ರಿ ಗ್ರಾಮ ಸೇವಾಕೇಂದ್ರ, ಕದ್ರಿ ಜಂಕ್ಷನ್ ನ ಮೊಬೈಲ್ ಅಂಗಡಿ, ಪೈಂಟ್ ಅಂಗಡಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಕಳವುಗೈದಿದ್ದರು. ಪೊಳಲಿ ದ್ವಾರದ ಬಳಿಯ ಹೊಟೇಲ್, ಅಂಗಡಿಗಳಲ್ಲಿ, ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ತರ ಸಹಕಾರ ಸಂಘದಲ್ಲಿ ಕಳವು ಮಾಡಿದ್ದರು. ಇನ್ನು ಆರೋಪಿಗಳು ಮಂಗಳೂರಿನ ಮಂಕಿ ಸ್ಟ್ಯಾಂಡ್ ಹಾಗೂ ಉತ್ತರ ದಕ್ಕೆಯಲ್ಲಿ ದ್ವಿ-ಚಕ್ರ ವಾಹನವನ್ನು ಕಳವುಗೈದಿದ್ದರು. ಇನ್ನು ಆರೋಪಿಗಳ ಬಳಿ ಇದ್ದ ಎರಡು ದ್ವಿಚಕ್ರ ವಾಹನಗಳು ಹಾಗೂ 1.20 ಲ.ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಸದ್ರಿ ಆರೋಪಿಗಳ ಬಂಧನದಿಂದ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಒಟ್ಟು 03 ಪ್ರಕರಣ, ಬಂಟ್ವಾಳ ನಗರ ಪೊಲೀಸ್ ಠಾಣೆಯ 03 ಪ್ರಕರಣ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 01 ಪ್ರಕರಣಗಳು ದಾಖಲಾಗಿದೆ. ಮೊಹಮ್ಮದ್ ಆಸಿಫ್ ಯಾನೆ ಆಸಿಫ್ ಈತನ ವಿರುದ್ದ ಮಂಗಳೂರು ಉತ್ತರ ಪೊಲೀಸ್ ಠಾಣೆ ಹಾಗೂ ಬರ್ಕೆ ಪೊಲೀಸ್ ಠಾಣೆಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಬಗ್ಗೆ ಮಾನ್ಯ ನ್ಯಾಯಾಲಯವು ವಾರೆಂಟ್ ಹೊರಡಿಸಿದೆ.
ಈ ಕಾರ್ಯಚರಣೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ರವರ ಮಾರ್ಗದರ್ಶನದಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ದಿನೇಶ್ ಕುಮಾರ್, ಮಂಗಳೂರು ನಗರ ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮಹೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅಜ್ಮತ್ ಅಲಿ.ಜಿ ರವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಫೈಜುನ್ನೀಸಾ ಹಾಗೂ ಉತ್ತರ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂಡ ನಡೆಸಿದೆ.




