
ಮಂಗಳೂರು : ಪಿಯು ವಿದ್ಯಾರ್ಥಿ ನಿಗೂಢ ನಾಪತ್ತೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಹಿಂದೂ ಸಂಘಟನೆಗಳು ಇಂದು ಬಂದ್ಗೆ ಕರೆ ನೀಡಿದ್ದರ ಹಿನ್ನಲೆಯಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿ ನಾಪತ್ತೆ ಹಿಂದೆ ಗಾಂಜಾ ಗ್ಯಾಂಗ್ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಫರಂಗಿಪೇಟೆಯ ಪಿಯು ವಿದ್ಯಾರ್ಥಿ ದಿಗಂತ್ ಫೆಬ್ರವರಿ 25ರಂದು ಸಂಜೆ 7 ಗಂಟೆಗೆ ನಾಪತ್ತೆ ಆಗಿದ್ದಾನೆ. ದಿಗಂತ್ ನಾಪತ್ತೆಯಾಗಿ 5 ದಿನವಾದರೂ ಪತ್ತೆಯಾಗಿಲ್ಲ. ದಿಗಂತ್ ಕಾಣೆಯಾಗಿರುವುದರ ಹಿಂದೆ ಗಾಂಜಾ ಗ್ಯಾಂಗ್ ಕೈವಾಡವಿದೆ ಎಂದು ಸಂಘಟನೆಗಳು ಆರೋಪಿಸಿವೆ. ಹೀಗಾಗಿ ಇಂದು ಬಂದ್ಗೆ ಕರೆ ನೀಡಿದ ಹಿಂದೂ ಪರ ಸಂಘಟನೆಗಳು ಇದು ಪೊಲೀಸ್ ಇಲಾಖೆ ವೈಫಲ್ಯ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಫರಂಗಿಪೇಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎರಡು ಕೆಎಸ್ಆರ್ಪಿ ತುಕಡಿ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಫೆಬ್ರವರಿ 25ರ ಸಂಜೆ ವ್ಯಾಯಾಮ ಶಾಲೆಗೆ ಹೋಗಿದ್ದ ದಿಗಂತ್ ಮನೆಗೆ ವಾಪಾಸ್ ಆಗಿಲ್ಲ. ವ್ಯಾಯಾಮ ಶಾಲೆಗೆ ಹೋಗಿದ್ದ ದಿನದಿಂದ ದಿಗಂತ್ ನಾಪತ್ತೆಯಾಗಿದ್ದಾನೆ.
ರೈಲು ಹಳಿಯಲ್ಲಿ ಈತನ ಚಪ್ಪಲಿ ಹಾಗೂ ಮೊಬೈಲ್ ದೊರಕಿದೆ. ದಿಗಂತ್ ಧರಿಸಿದ ಚಪ್ಪಲಿಗೆ ರಕ್ತದ ಕಲೆ ಇರುವುದು ಕಂಡು ಬಂದಿದೆ. ಇದರಿಂದ ಈತನನ್ನು ಯಾರು ಕರೆದುಕೊಂಡು ಹೋಗಿದ್ದಾರೆ, ಯಾರು ಕಿಡ್ನ್ಯಾಪ್ ಮಾಡಿದ್ದಾರೆ ಇದ್ಯಾವುದರ ಸುಳಿವು ಈವರೆಗೂ ಸಿಕ್ಕಿಲ್ಲ.
ಹೀಗಾಗಿ ಮಂಗಳೂರಿನ ಖಾಸಗಿ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ದಿಗಂತ ನಾಪತ್ತೆ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೂ ಕೂಡ ಈವರೆಗೂ ವಿದ್ಯಾರ್ಥಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೊಲೀಸರ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪೊಲೀಸರ ವೈಫಲ್ಯದ ಬಗ್ಗೆ ಪ್ರತಿಭಟನಾಕಾರರು ಪ್ರಶ್ನೆಯನ್ನು ಮಾಡುತ್ತಿದ್ದಾರೆ.
ಇದೇ ವೇಳೆ ಅಪರಿಚಿತ ಕ್ವಾಲಿಸ್ ಕಾರು ಓಡಾಟ ಅನುಮಾನ ಹುಟ್ಟಿಸಿದೆ. ದಿಗಂತ್ ನಾಪತ್ತೆಯಾದ ಸಮಯದಲ್ಲಿ ಬಂದಿದ್ದ ಕಾರು, ಆಂಜನೇಯ ವ್ಯಾಯಾಮ ಶಾಲೆ ಸಿಸಿಟಿವಿಯಲ್ಲಿ ದೃಶ್ಯದಲ್ಲಿ ಸೆರೆಯಾಗಿದೆ. ಇದು ಗಾಂಜಾ ಗ್ಯಾಂಗ್ ಕೈವಾಡ ಎಂದು ವಿಹೆಚ್ಪಿ ಆರೋಪ ಮಾಡಿದೆ.
ಈ ಅನುಮಾನ ಬಗೆಹರಿಸಬೇಕು. ಈ ಪ್ರಕರಣದ ಸತ್ಯ ಬಯಲು ಮಾಡಬೇಕು, ಇದರ ಹಿಂದೆ ಇರುವವರು ಯಾರು ಎನ್ನುವುದನ್ನು ಪೊಲೀಸರು ಹೊರತೆಗೆಯಬೇಕಿದೆ. ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ, ಪ್ರಕರಣವನ್ನು ಭೇದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ಇಂದಿನಿಂದ ದ್ವೀತಿಯ ಪಿಯುಸಿ ಪರೀಕ್ಷೆ ಆರಂಭವಾಗಿವೆ. ಪರೀಕ್ಷೆಗೆ ಹೆದರಿ ದಿಗಂತ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಕುಟುಂಬಸ್ಥರು ಹೇಳುವ ಪ್ರಕಾರ ದಿಗಂತ್ ಪರೀಕ್ಷೆಗೆ ಹೆದರಿಕೊಳ್ಳುವ ಹುಡುಗನಲ್ಲ. ಆತ ಪರೀಕ್ಷೆಯ ಹಾಲ್ ಟಿಕೆಟ್ ಕೂಡ ತೆಗೆದುಕೊಂಡು ಬಂದಿದ್ದ. ಪೊಲೀಸರು ಹೇಳುವಂತೆ ದಿಗಂತ್ ಪರೀಕ್ಷೆಗೆ ಹೆದರಿ ಹೋಗಿದ್ದರೆ ಅವನ ಚಪ್ಪಲಿಗೆ ರಕ್ತದ ಕಲೆ ಹೇಗೆ ಬಂತು. ಆತನ ಮೊಬೈಲ್ ರೈಲು ಹಳಿಯ ಮೇಲೆ ಯಾಕೆ ಬಂತು? ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಾಕ್ಷಿ ಸಿಕ್ಕ ಬಳಿಕ ಪೊಲೀಸರು ಅಲರ್ಟ್ ಆಗಿದ್ದಾರೆ.
ಆದರೆ ದುರ್ದೈವ ಇನ್ನೂ ಕುಡ ದಿಗಂತ ಸಿಕ್ಕಿಲ್ಲ. ಮೋಬೈಲ್ ಕೂಡ ರೈಲು ಹಳಿಯ ಮೇಲೆ ಬಿದ್ದಿದೆ. ಅಪರಿಚಿತ ಕಾರು ಓಡಾಡಿದೆ. ಇದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿದೆ. ಆದಷ್ಟು ಬೇಗ ಪೊಲೀಸರು ದಿಗಂತ್ನನ್ನು ಹುಡುಕಿ ಕೊಡಬೇಕು ಎಂದು ಹಿಂದೂಪರ ಸಂಘಟನೆ ಮುಖ್ಯಸ್ಥರು ಮನವಿ ಮಾಡಿದ್ದಾರೆ.




