ಮಣಿಪಾಲ್ ಆರೋಗ್ಯ ಕಾರ್ಡ್ 2024ರ ನೋಂದಣಿ ಪ್ರಕ್ರಿಯೆ ಆರಂಭ

Share with

ಮಣಿಪಾಲ: ಮಣಿಪಾಲ ಆರೋಗ್ಯ ಕಾರ್ಡ್ 2024ರ ನೋಂದಣಿ ಪ್ರಕ್ರಿಯೆ ಇಂದಿನಿಂದ (ಜೂನ್ 18) ಆರಂಭಗೊಳ್ಳುತ್ತಿದೆ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ತಿಳಿಸಿದರು.
ಮಣಿಪಾಲದ ಮಾಹೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಟಿ.ಎಂ.ಎ. ಪೈ ಅವರು ಸಮಾಜಕ್ಕೆ ನೀಡಿದ ಸಮರ್ಪಣೆ ಮತ್ತು ಸೇವೆ ಅಪರೂಪ. ಮಣಿಪಾಲ್ ಆರೋಗ್ಯ ಕಾರ್ಡ್ ಇಡೀ ಕುಟುಂಬಕ್ಕೆ ಸಮಗ್ರ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಂದಿನ ಮಾಹೆಯ ಕುಲಪತಿ ಡಾ. ರಾಮದಾಸ್ ಎಂ ಪೈ ಅವರ ನೇತೃತ್ವದಲ್ಲಿ 2000 ರಲ್ಲಿ ಪ್ರಾರಂಭವಾದ ಮಣಿಪಾಲ್ ಹೆಲ್ತ್ ಕಾರ್ಡ್ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವುದೇ ಮುಖ್ಯ ಗುರಿಯಾಗಿದೆ. ಉಚಿತ ಆರೋಗ್ಯ ಸೇವೆಯನ್ನು ನೀಡಲು ಸಾಧ್ಯವಾಗದಿದ್ದರೂ, ಈ ಉಪಕ್ರಮವು ಕೈಗೆಟುಕುವ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆಯನ್ನು ನೀಡುತ್ತದೆ. 2018 ರಲ್ಲಿ ಎರಡು ವರ್ಷಗಳ ಮಣಿಪಾಲ್ ಆರೋಗ್ಯಕಾರ್ಡ್ ಅನ್ನು ಸೇರಿಸಲು ಯೋಜನೆಯನ್ನು ವಿಸ್ತರಿಸಲಾಯಿತು. ಸದಸ್ಯರಿಗೆ ಇನ್ನಷ್ಟು ಹೆಚ್ಚಿನ ಮೌಲ್ಯಾಧಾರಿತ ಲಾಭ ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಕರಾವಳಿ ಮತ್ತು ಮಧ್ಯ ಕರ್ನಾಟಕದ 12-15 ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು, ಬಳ್ಳಾರಿ ಮತ್ತು ನೆರೆಯ ರಾಜ್ಯಗಳಾದ ಕೇರಳ ಮತ್ತು ಗೋವಾ ರಾಜ್ಯಗಳಿಗೆ ಕಾರ್ಡ್‌ ವಿಸ್ತರಣೆಗೊಂಡಿದೆ. 2019 ರಲ್ಲಿ ಡಿಜಿಟಲ್ ಮೋಡ್‌ಗೆ ಪರಿವರ್ತನೆಯಾದಾಗಿನಿಂದ, ಮುಂಬರುವ ವರ್ಷಗಳಲ್ಲಿ ಸಂಪೂರ್ಣವಾಗಿ ಕಾರ್ಡ್ ರಹಿತ ಮತ್ತು ಗ್ರಾಹಕ ಸ್ನೇಹಿಯಾಗಲು ಯೋಜನೆಯು ಗುರಿ ಹೊಂದಿದೆ. ಕಳೆದ 23 ವರ್ಷಗಳಲ್ಲಿ, ಮಣಿಪಾಲ್ ಆರೋಗ್ಯ ಕಾರ್ಡ್ ಲಕ್ಷಾಂತರ ಜನರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಿದೆ ಎಂದು ಮಾಹೆಯ ಸಹ ಕುಲಪತಿ ಡಾ. ಶರತ್ ಕೆ ರಾವ್ ಹೇಳಿದರು. 2023 ರಲ್ಲಿ 3,60,000 ಸದಸ್ಯರನ್ನು ನೋಂದಾಯಿಸಿಕೊಂಡಿದ್ದು, ಇದು ಅದರ ಬೆಳೆಯುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ, ಹೊರರೋಗಿ ವಿಭಾಗದಲ್ಲಿ 52% ಮತ್ತು ಒಳರೋಗಿ ವಿಭಾಗದಲ್ಲಿ ಸುಮಾರು 20% ರಷ್ಟು ಜನರು ಮಣಿಪಾಲ್ ಆರೋಗ್ಯ ಕಾರ್ಡ್ ಅನ್ನು ಬಳಸುತ್ತಿದ್ದಾರೆ ಹಾಗು ಇದು ಸರಿಸುಮಾರು 16 ಕೋಟಿಗಳ ರಿಯಾಯಿತಿಯನ್ನು ಕಳೆದ ಸಾಲಿನಲ್ಲಿ ನೀಡಿದೆ ಎಂದರು.
ಕಾರ್ಡುದಾರರು ಕಸ್ತೂರ್ಬಾ ಆಸ್ಪತ್ರೆ-ಮಣಿಪಾಲ, ಡಾ.ಟಿಎಂಎ ಪೈ ಆಸ್ಪತ್ರೆ-ಉಡುಪಿ, ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ-ಕಾರ್ಕಳ, ಕೆಎಂಸಿ ಆಸ್ಪತ್ರೆ-ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ-ಕಟೀಲು ಮತ್ತು ಮಣಿಪಾಲ್ ಆಸ್ಪತ್ರೆ-ಗೋವಾಗಳಲ್ಲಿ ಕಾರ್ಡ್‌ದಾರರು ಪ್ರಯೋಜನ ಪಡೆಯಬಹುದು ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದರು. ಇತರ ಆಸ್ಪತ್ರೆಗಳಲ್ಲಿನ ರಿಯಾಯಿತಿಗಳು ಮತ್ತು ಹೆಚ್ಚಿನ ಮಾಹಿತಿಗಾಗಿ, www.manipalhealthcard.com ಗೆ ಭೇಟಿ ನೀಡಿ ಅಥವಾ 9980854700 / 08202923748 ಅನ್ನು ಸಂಪರ್ಕಿಸಿ. ಎಲ್ಲಾ ಅಧಿಕೃತ ಪ್ರತಿನಿಧಿಗಳ ಮೂಲಕ ಕೂಡ ನೋಂದಣಿ ಸೌಲಭ್ಯ ಲಭ್ಯವಿದೆ.
ಮಣಿಪಾಲ ಆರೋಗ್ಯ ಕಾರ್ಡ್‌ದಾರರು ತಜ್ಞ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರೊಂದಿಗೆ ಸಮಾಲೋಚನೆ ಶುಲ್ಕದಲ್ಲಿ 50% ರಿಯಾಯಿತಿ, ರೋಗನಿರ್ಣಯ ಮತ್ತು ಪ್ರಯೋಗಾಲಯ ತನಿಖೆಗಳಲ್ಲಿ 25% ರಿಯಾಯಿತಿ, ವಿಕಿರಣಶಾಸ್ತ್ರದ ತನಿಖೆಗಳು, ಹೊರರೋಗಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ 20% ರಿಯಾಯಿತಿ, ಡಯಾಲಿಸಿಸ್‌ನಲ್ಲಿ ₹100/- ರಿಯಾಯಿತಿ, ಆಸ್ಪತ್ರೆಯ ಔಷಧಾಲಯಗಳಿಂದ ಔಷಧಿಗಳ ಮೇಲೆ 10% ವರೆಗೆ ರಿಯಾಯಿತಿ, ಮತ್ತು ಜನರಲ್ ವಾರ್ಡ್‌ನಲ್ಲಿ ಒಳರೋಗಿಗಳ ಬಿಲ್‌ಗಳಲ್ಲಿ (ಕಾನ್ಸುಮಬೆಲ್ಸ್ ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ) 25% ರಿಯಾಯಿತಿ ದೊರೆಯುತ್ತದೆ ಎಂದು ತಿಳಿಸಿದರು.
ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕರಾದ ಶ್ರೀ ಮೋಹನ್ ಶೆಟ್ಟಿ ಸಂಯೋಜಿಸಿದ ಕಾರ್ಯಕ್ರಮವು ಡಾ.ಶಶಿಕಿರಣ್ ರವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ಮಾಹೆ ಮಣಿಪಾಲದ ನಿರ್ವಹಣಾಧಿಕಾರಿ ಶ್ರೀ ಸಿ ಜಿ ಮುತ್ತಣ್ಣ , ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್, ಕಾರ್ಕಳದ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ್ ಬಲ್ಲಾಳ್ ಹಾಗೂ ಕೆ. ಸಚಿನ್ ಕಾರಂತ್ ಉಪಸ್ಥಿತರಿದ್ದರು


Share with

Leave a Reply

Your email address will not be published. Required fields are marked *