ಮನೆಗೆ ನುಗ್ಗಿ ಮಗನಿಗೆ ಹಲ್ಲೆಯತ್ನ, ಜೀವಬೆದರಿಕೆ ಆರೋಪ – ಅಜಿತ್ ರೈ ವಿರುದ್ಧ ಮನೀಷ್ ಕುಲಾಲ್ ತಂದೆ ದೂರು

Share with


ಪುತ್ತೂರು:ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ ಮಗನಿಗೆ ಹಲ್ಲೆಯತ್ನ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಅಜಿತ್ ರೈ ಹೊಸಮನೆ ಎಂಬವರ ವಿರುದ್ಧ ಮನೀಷ್ ಕುಲಾಲ್ ಅವರ ತಂದೆ ಆನಂದ ಎಸ್.ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜು. 10ರಂದು ಈ ಘಟನೆ ನಡೆದಿದ್ದು ನ.10ರಂದು ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಜುಲೈ 10ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಆರೋಪಿತ ಅಜಿತ್ ರೈ ಹೊಸಮನೆ ಅವರು ಮನೆಗೆ ಅಕ್ರಮವಾಗಿ ಪ್ರವೇಶಿಸಿ ನನ್ನ ಮಗ ಮನೀಶ್ ಕುಲಾಲ್ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಮಗನಿಗೆ ಜೀವ ಬೆದರಿಕೆ ಒಡ್ಡಿರುವುದು ನನಗೆ ತಡವಾಗಿ ತಿಳಿದಿರುತ್ತದೆ. ಈ ವಿಷಯವನ್ನು ದೊಡ್ಡದು ಮಾಡಬಾರದೆಂದು ನನ್ನ ಮಕ್ಕಳು ನನಗೆ ತಿಳಿಸಿರಲಿಲ್ಲ. ಆದರೆ ನ.10ರಂದು ಮಗ ಮನೀಶ್ ಕುಲಾಲ್‌ನ ಮೇಲೆ ಹಲ್ಲೆ ಮಾಡಿ ಹತ್ಯೆಯ ಸಂಚು ಮಾಡಿರುವುದು ಆತಂಕ ಸೃಷ್ಟಿ ಮಾಡಿದೆ.

ಈ ಕೃತ್ಯದ ಹಿಂದೆ ಆರೋಪಿತರ ಕೈವಾಡವಿರುವುದರಿಂದ ಆರೋಪಿತ ಅಜಿತ್ ರೈ ಹೊಸಮನೆ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಮನೀಶ್ ಕುಲಾಲ್ ಅವರ ತಂದೆ ಪಡೀಲ್ ನಿವಾಸಿ ಆನಂದ್ ಎಸ್.ಅವರು ಪುತ್ತೂರು ನಗರ ಪೊಲೀಸರಿಗೆ ನ.10ರಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಅಜಿತ್ ರೈ ವಿರುದ್ಧ ಸೆಕ್ಷನ್ 447,504, 506ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *