ಕಾಸರಗೋಡು : ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಯನ್ನು ಪ್ರತಿಭಟಿಸಿ ಮಾ.28 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ತಾಲೂಕು ಕಚೇರಿಯ ಮುಂಭಾಗದಲ್ಲಿ ಬೃಹತ್ ಧರಣಿ ಸತ್ಯಾಗ್ರಹ – ಪ್ರತಿಭಟನ ಸಭೆ ನಡೆಸಲು ಹಾಗೂ ಮಸೂದೆಯ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಲು ತೀರ್ಮಾನಿಸಲಾಗಿದೆ.

ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ಕರ್ನಾ ಟಕ ಸಮಿತಿ ನೇತೃತ್ವದಲ್ಲಿ ಕಾಸರಗೋಡಿನ ಕನ್ನಡಿಗರ, ಅಧ್ಯಾಪಕರ, ವಿವಿಧ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ಪಂ. ಮಟ್ಟಗಳಲ್ಲೂ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲು ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ, ನಿವೃತ್ತ ನ್ಯಾಯಾಧೀಶರಾದ ರಾಜ್ಕುಮಾರ್, ನ್ಯಾಯವಾದಿ ಶ್ರೀಕಾಂತ್, ಡಾ। ರತ್ನಾಕರ ಮಲ್ಲಮೂಲೆ, ನಿವೃತ್ತ ಡಿಇಒ ಮಹಾಲಿಂಗೇಶ್ವರ ರಾಜ್, ನಿವೃತ್ತ ಡಿಇಒ ಮೋಹನ್ದಾಸ್, ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ ನ್ಯಾಯವಾದಿ ಸುಬ್ಬಯ್ಯ ರೈ, ನ್ಯಾಯವಾದಿ ಮಹೇಶ್, ನ್ಯಾಯವಾದಿ ಸತ್ಯನಾರಾಯಣ, ನಿವೃತ್ತ ಎಇಒ ಯತೀಶ್ ಕುಮಾರ್ ರೈ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.




