ಬೆಂಗಳೂರು, ಅಕ್ಟೋಬರ್ 4: ನಾಡ ಹಬ್ಬ ದಸರಾ (Dasara) ಸಂಭ್ರಮಕ್ಕೆ ಶುಕ್ರವಾರ ಅದ್ದೂರಿಯಾಗಿ ತೆರೆ ಬಿದ್ದಿದೆ. ಆದರೆ ಕೊನೆಯ ದಿನ ನಂದಿ ಧ್ವಜ ಪೂಜೆ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ , ಸಚಿವರಾದ. ಹೆಚ್ ಸಿ ಮಹದೇವಪ್ಪ, ಶಿವರಾಜ ತಂಗಡಗಿ ತೆರೆದ ಜೀಪ್ನಲ್ಲಿ ಅರಮನೆ ಆವರಣದಲ್ಲಿ ಪರೇಡ್ ಮಾಡುವ ವೇಳೆ ನಾಯಕರ ಮಧ್ಯೆ ಕೂಲಿಂಗ್ ಗ್ಲಾಸ್ ಧರಿಸಿ ಕಾಣಿಸಿಕೊಂಡ ಬಾಲಕನ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಿಕೊಂಡಿದೆ. ಇದು ಕಾಂಗ್ರೆಸ್ (Congress) ಹೈಕಮಾಂಡ್ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಪರೇಡ್ನಲ್ಲಿ ಭಾಗಿಯಾಗಿದ್ದ ಬಾಲಕ ಯಾರು? ಆತ ಯಾಕೆ ನಾಯಕರ ಜೊತೆ ಪರೇಡ್ನಲ್ಲಿ ಭಾಗಿಯಾದ? ಪ್ರೋಟೋಕಾಲ್ ಅವನಿಗೆ ಇತ್ತಾ ಎಂಬ ಬಗ್ಗೆ ದೆಹಲಿ ಕಾಂಗ್ರೆಸ್ ನಾಯಕರು ಕರ್ನಾಟಕದ ಎರಡನೇ ಹಂತದ ನಾಯಕರ ಬಳಿ ಮಾಹಿತಿ ಕೇಳಿದ್ದಾರೆ. ಸಚಿವ ಮಹದೇವಪ್ಪ ಮೊಮ್ಮಗ ಸಿಎಂ, ಡಿಸಿಎಂ ಜತೆ ಪರೇಡ್ನಲ್ಲಿ ಕಾಣಿಸಿಕೊಂಡಿದ್ದು ಇಷ್ಟಕ್ಕೆಲ್ಲ ಕಾರಣವಾಗಿದೆ.

ಸದ್ಯ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜಕೀಯ ಪಕ್ಷಗಳು ಕೂಡ ಇದೇ ವಿಚಾರವಾಗಿ ಕಿಡಿಕಾರಿವೆ. ನಾಡ ಹಬ್ಬದ ಸರಾ ಸರ್ಕಾರಿ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಕುಟುಂಬದ ಪ್ರವೇಶ ಯಾಕೆ ಎಂಬ ಪ್ರಶ್ನೆ ಎದ್ದಿದೆ. ಮೈಸೂರು ಜಿಲ್ಲಾಡಳಿತದಿಂದ ತೆರೆದ ಜೀಪ್ನಲ್ಲಿ ಪರೇಡ್ ಸಿಎಂ ಪ್ರೋಟೋಕಾಲ್ ಆಗಿತ್ತಾ ಆಗಿದ್ದರೆ ಆ ಬಾಲಕ ಭಾಗಿಯಾಗಿದ್ದು ನಿಯಮ ಉಲ್ಲಂಘನೆ ಅಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲದೆ, ಪ್ರೋಟೋಕಾಲ್ ಅಲ್ಲ ಎಂದಾದರೆ ಆ ಬಾಲಕನಿಗೆ ಮಾತ್ರ ಯಾಕೆ ಅವಕಾಶ ಎಂಬ ಟೀಕೆಗಳು ಕೂಡ ಜೋರಾಗಿವೆ.
ಎಲ್ಲ ಕಡೆ ಮೊಮ್ಮಕ್ಕಳದ್ದೇ ದರ್ಬಾರು: ಛಲವಾದಿ ನಾರಾಯಣಸ್ವಾಮಿ ಕಿಡಿ
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯಮಂತ್ರಿಗಳು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪನವರನ್ನು ನೋಡಿದರೆ ಎಲ್ಲಾ ಕಡೆ ಮೊಮ್ಮಕ್ಕಳದೇ ದರ್ಬಾರು ಆಗಿದೆ. ಸಿಎಂ ಮೊಮ್ಮಗ, ಮಹದೇವಪ್ಪನವರ ಮೊಮ್ಮಗ ಇವರಿಗೆಲ್ಲಾ ಗದೆ ಕೊಟ್ಟು ವಿಜೃಂಭಿಸುವ ಕೆಲಸ ಆಗುತ್ತಿದೆ. ಇವರಷ್ಟೇ ಲೂಟಿ ಮಾಡುತ್ತಿಲ್ಲ, ಮಕ್ಕಳಿಂದಲೂ ಲೂಟಿ ಮಾಡಿಸುತ್ತಿದ್ದಾರೆ. ಇವರಿಗೆ ಜನರ ಚಿಂತೆ ಇಲ್ಲ, ಮೊಮ್ಮಕ್ಕಳ ಚಿಂತೆ. ಇದು ರಿಯಲ್ ಎಸ್ಟೇಟ್ ಸರ್ಕಾರ ಆಗಿದೆ ಎಂದು ವಾಗ್ದಾಳಿ ನೆಡೆಸಿದ್ದಾರೆ.




