ಅಪಾಯದ ಮಟ್ಟ ಮೀರಿ ನೇತ್ರಾವತಿಯಲ್ಲಿ ನೀರು ಹರಿಯುತ್ತಿದ್ದು,
ಬಂಟ್ವಾಳದ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು,ಅಂತಹ ಮನೆಗಳಿಗೆ ಶಾಸಕ ರಾಜೇಶ್ ನಾಯ್ಕ್ ಅವರು ಬೇಟಿ ನೀಡಿ ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಮಾಡುವಂತೆ ತಹಶಿಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ.
ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬಂಟ್ವಾಳ ತಾಲೂಕಿನ ನದಿ ತೀರದ ಸಾಕಷ್ಟು ಮನೆಗಳು ಮುಳುಗಡೆಯಾಗಿದೆ. ನಾವೂರ ಗ್ರಾಮದ ಮೈಂದಾಳ ಎಂಬಲ್ಲಿ ಸುಮಾರು 8 ಮನೆಗಳಿಗೆ ನೀರು ನುಗ್ಗಿದ್ದು, ಮಳೆಯಲ್ಲಿ ಒದ್ದೆಯಾಗಿಕೊಂಡು ಶಾಸಕರು ತಾಲೂಕಿನ ಮಳೆಹಾನಿಯಾದ ಮತ್ತು ನೀರು ನುಗ್ಗಿ ಅಪಾಯಕಾರಿ ಪರಿಸ್ಥಿತಿಯಲ್ಲಿ ರುವ ಮನೆಗಳಿಗೆ ಭೇಟಿ ನೀಡಿದರು.
ತಾಲೂಕಿನ ಪಾಣೆಮಂಗಳೂರು, ಬಂಟ್ವಾಳ, ನಾವೂರು, ಸರಪಾಡಿ, ಮಣಿನಾಲ್ಕೂರು ಗ್ರಾಮಗಳಲ್ಲಿ ಕೃಷಿ ತೋಟಗಳು, ಗದ್ದೆಗಳು ಮುಳುಗಡೆಯಾಗಿದೆ.
ಬಂಟ್ವಾಳ- ಜಕ್ರಿಬೆಟ್ಟು ರಸ್ತೆಯ ಕೋಟೆಕಣಿ, ಬಿ.ಸಿ.ರೋಡಿನ ಬಸ್ತಿಪಡ್ಪು, ಆಲಡ್ಕ ಪ್ರದೇಶ ಮೊದಲಾದ ಪ್ರದೇಶದಲ್ಲಿ ರಸ್ತೆಗೆ ನೀರು ಬಿದ್ದು ಸಂಚಾರ ಕಡಿತಗೊಂಡಿದೆ.
*ಅಪಾಯಕಾರಿ ಮನೆಗಳ ಕುಟುಂಬ ಸ್ಥಳಾಂತರ ಮಾಡಿ ಅಧಿಕಾರಿಗಳಿಗೆ ಸೂಚನೆ : ಶಾಸಕ ರಾಜೇಶ್ ನಾಯ್ಕ್*
ಕಳೆದ ಕೆಲವು ದಿನಗಳಿಂದ ಅತಿಯಾಗಿ ಮಳೆಯಾಗುತ್ತಿದ್ದು,ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ, ಅಂತಹ ಅಪಾಯಕಾರಿ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸುರಕ್ಷಿತವಲ್ಲದ ಮತ್ತು ನೀರು ನುಗ್ಗಿ ಅಪಾಯವಿರುವ ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಅಗತ್ಯ ವಿರುವ ಎಲ್ಲಾ ವ್ಯವಸ್ಥೆ ಗಳನ್ನು ತಾಲೂಕು ಆಡಳಿತದ ಮೂಲಕ ಮಾಡಲು ತಿಳಿಸಿದ್ದೇನೆ.
ಮಳೆ ಕಡಿಮೆಯಾದ ಬಳಿಕ ನೆರೆ ಬಂದು ಹೋದ ಬಳಿಕ ಮನೆಗಳಲ್ಲಿ ಕೆಸರು ತುಂಬಿಕೊಂಡಿರುತ್ತದೆ. ಅಂತಹ ಮನೆಗಳ ಕೆಸರನ್ನು ತೆಗೆಯಲು ತಾಲೂಕು ಆಡಳಿತ ಸೂಕ್ತವಾದ ವ್ಯವಸ್ಥೆ ಮಾಡುವಂತೆ ತಹಶಿಲ್ದಾರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ಜನಾರ್ದನ, ಗ್ರಾಮಾಂತರ ಎಸ್.ಐ.ಹರೀಶ್, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಬಿಜೆಪಿ ಪ್ರಮುಖರಾದ ಎ.ಗೋವಿಂದ ಪ್ರಭು, ನಂದರಾಮ ರೈ,ಗಣೇಶ್ ರೈ ಮಾಣಿ, ಜನಾರ್ಧನ, ಸದಾನಂದ ನಾವೂರ, ಧನಂಜಯ ಶೆಟ್ಟಿ ಸರಪಾಡಿ,ಆಶೋಕ್ ಶೆಟ್ಟಿ ಸರಪಾಡಿ, ದೇಜಪ್ಪ ಬಾಚಕೆರೆ, ಶಾಂತಪ್ಪ ಪೂಜಾರಿ ಹಟ್ಟದಡ್ಕ, ಚಂದ್ರಹಾಸ ಶೆಟ್ಟಿ ಹೊಳ್ಳರ ಗುತ್ತು, ಆನಂದ ಶೆಟ್ಟಿ ಬಾಚಕೆರೆ ಮತ್ತಿತರ ಉಪಸ್ಥಿತರಿದ್ದರು.