ಮಂಗಳೂರು: ಮಂಗಳೂರಿನಿಂದ ಉಮ್ರಾ ಯಾತ್ರೆಗೆ ಹೋದವರ ಟ್ರಾಲಿ ಬ್ಯಾಗ್ ನಿಂದ 26,432 ಸೌದಿ ರಿಯಾಲ್ (6 ಲ.ರೂ) ಕಳವಾಗಿದ್ದು, ಇದಕ್ಕೆ ಖಾಸಗಿ ವಿಮಾನ ಯಾನ ಸಂಸ್ಥೆಯೇ ಕಾರಣವಾಗಿದ್ದು ಅದರ ಸಿಬಂದಿಯೇ ಹಣ ಕಳವು ಮಾಡಿರುವ ಸಂಶಯ ಇದೆ ಎಂದು ಹಣ ಕಳೆದುಕೊಂಡ ಮಂಗಳೂರಿನ ಬದ್ರುದ್ದೀನ್ ಜೂ. 19ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.
ಘಟನೆಯ ವಿವರ: ಎ.30 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈ ಮಾರ್ಗವಾಗಿ ಸೌದಿ ಅರೇಬಿಯಾದ ಜೆದ್ದಾಕ್ಕೆ ಇತರ 34 ಮಂದಿಯೊಂದಿಗೆ ಇಂಡಿಗೋ ವಿಮಾನದಲ್ಲಿ ಉಮ್ರಾ ಯಾತ್ರೆಗೆ ಹೊರಟಿದ್ದೆ. ಅದರಲ್ಲಿ 11 ಮಂದಿಯ ಜವಾಬ್ದಾರಿಯನ್ನು ಟ್ರಾವೆಲಿಂಗ್ ಏಜೆನ್ಸಿಯವರು ತನಗೆ ನೀಡಿದ್ದರು.
ಮುಂದುವರೆದು ಮಾತನಾಡಿ, ವಿಮಾನ ಯಾನ ಸಂಸ್ಥೆಯ ಸಿಬಂದಿ ಬ್ಯಾಗ್ ನ್ನು ಎರಡು ಬಾರಿ ಸ್ಕ್ಯಾನ್ ಮಾಡಿದ್ದರು. ಮೇ.1 ರಂದು ರಾತ್ರಿ ಜೆದ್ದಾ ತಲುಪಿ ವಿಮಾನ ನಿಲ್ದಾಣದಿಂದ ಹೊರಗಡೆ ಹೋಗಿ ನೋಡಿದಾಗ ಬ್ಯಾಗ್ ಗೆ ಬೀಗ ಹಾಕಿದ್ದು ಗಮನಕ್ಕೆ ಬಂದಿದೆ. ಒಳಗಡೆ ನೋಡಿದಾಗ ಅದರಲ್ಲಿದ್ದ ಹಣ ಕಳವಾಗಿತ್ತು ಎಂದರು.
ಘಟನೆಯ ಬಗ್ಗೆ ಈಗಾಗಲೇ ಪೊಲೀಸ್ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿಮಾನ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದರು.