ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸೆ. 22ರಂದು ನವರಾತ್ರಿ ಉತ್ಸವದ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ದೇಗುಲದ ತಂತ್ರಿ ಹಾಗು ಅರ್ಚಕ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ಗಣಪತಿ ಪೂಜೆಯೊಡನೆ ವಿವಿಧ ಧಾರ್ಮಿಕ ಕಾರ್ಯ ನೆರವೇರಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹಾಗು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸ್ವರ್ಣ ಮುಖಿ ಸಭಾಭವನದಲ್ಲಿ 10 ದಿನಗಳ ಕಾಲ ಕರ್ನಾಟಕ ಸಹಿತ ವಿವಿಧ ರಾಜ್ಯಗಳ ನುರಿತ ತಂಡಗಳಿಂದ ನಡೆಯಲಿರುವ ಭರತನಾಟ್ಯಂ, ಕೂಚುಪುಡಿ, ಭಕ್ತಿಗೀತೆಗಳು ಶಾಸ್ತ್ರೀಯ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಾಬು ಶೆಟ್ಟಿ ಉದ್ಘಾಟಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ, ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ಸುಧಾ ಕೆ, ದೇಗುಲದ ಸಿಬಂದಿಗಳು,ವಿವಿಧ ಸಂಘಟನೆಯ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.
ಅ.1ರಂದು ಬೆಳಗ್ಗೆ 11.30 ಕ್ಕೆ ಚಂಡಿಕಾಯಾಗ, ಹಾಗು ಅಪರಾಹ್ನ 1.15 ಕ್ಕೆ ರಥೋತ್ಸವ ನಡೆಯಲಿದೆ




