
ವಿಟ್ಲ: ಎಮರ್ಜೆನ್ಸಿ ಟೀಂ ಕೋಡಪದವು ಹಾಗೂ MNG ಫೌಂಡೇಶನ್ ಮಂಗಳೂರು ಇದರ ವತಿಯಿಂದ ದಿ.ಅಬೂಬಕ್ಕರ್ ಕುಕ್ಕಿಲ ಕುಟುಂಬಕ್ಕೆ ನಿರ್ಮಿಸಿದ ನೂತನ ಮನೆಯ ಕೀ ಹಸ್ತಾಂತರ ಮತ್ತು ಗೃಹಪ್ರವೇಶ ಕಾರ್ಯಕ್ರಮ ಇಂದು ಕೋಡಪದವು ಸಮೀಪದ ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊನ್ಯಕುಕ್ಕು ಎಂಬಲ್ಲಿ ಜರುಗಿತು..
ಇತ್ತೀಚೆಗೆ ಹಠತ್ತಾಗಿ ಮಾರಕ ಕಾಯಿಲೆಯೊಂದಕ್ಕೆ ತುತ್ತಾಗಿ ವಿಟ್ಲಪಡ್ನೂರು ಗ್ರಾಮದ ಕುಕ್ಕಿಲ ಎಂಬಲ್ಲಿ ಪುಟ್ಟ ಮೂರು ಮಕ್ಕಳ ತಂದೆ ಅಬೂಬಕ್ಕರ್ ಎಂಬುವವರು ನಿಧನ ಹೊಂದಿದ್ದು, ಹೆಂಡತಿ ತವರು ಮನೆಯಲ್ಲಿ ವಾಸಿಸುತ್ತಿದ್ದರು. ರೋಗಕ್ಕೆ ತುತ್ತಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಹೈರಣಾಗಿದ್ದ ಕುಟುಂಬ ಕಷ್ಟದ ಜೀವನ ನಡೆಸುತ್ತಿತ್ತು,ಇದನ್ನು ಮನಗಂಡು ಸ್ಥಳೀಯ ಸಂಘಟನೆಯಾದ ಎಮರ್ಜೆನ್ಸಿ ಟೀಂ ತಂಡ, ಕುಕ್ಕಿಲ ಜಮಾಅತ್ ಅಧ್ಯಕ್ಷರೂ, ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ಕುಕ್ಕಿಲ ಮುಖಾಂತರ ಮಾತುಕತೆ ನಡೆಸಿ ಎಮರ್ಜೆನ್ಸಿ ಕೋಡಪದವು ತಂಡ ಮನೆ ನಿರ್ಮಿಸಿ ಕೊಡಲು ತೀರ್ಮಾನಿಸಿತ್ತು. ಅದರಂತೆ MNG ಫೌಂಡೇಶನ್ ಸಹಕಾರದೊಂದಿಗೆ ಸುಸಜ್ಜಿತ ಮೂಲ ಸೌಕರ್ಯಗಳನ್ನೊಳಗೊಂಡ ಸುಂದರ ಮನೆ ನಿರ್ಮಿಸಿ ಶನಿವಾರ ಅಬೂಬಕ್ಕರ್ ಪತ್ನಿ ಅಸಿಯಮ್ಮ ಹಾಗೂ ಮೂರು ಪುಟಾಣಿ ಮಕ್ಕಳಿಗೆ ಮನೆಯನ್ನು ಹಸ್ತಾಂತರಿಸಲಾಯಿತು.

ಈ ಶುಭ ಸಮಾರಂಭದ ಮುಖ್ಯ ಅತಿಥಿಯಾದ ಸ್ಥಳೀಯರಾದ ಕುಕ್ಕಿಲ ದಾರಿಮಿ ದುವಾ ಆಶೀರ್ವಚನ ನೀಡಿ , ಎಮರ್ಜೆನ್ಸಿ ಟೀಂ ಸಂಘಟನೆಯ ಜನರಲ್ ಗ್ರೂಪಿನಲ್ಲಿ ನಾನು ಕೂಡ ಸದಸ್ಯನಾಗಿದ್ದು, ಸಂಘಟನೆಯ ಎಲ್ಲಾ ಕಾರ್ಯಚಟುಟಿಕೆಗಳ ಬಗ್ಗೆ ವಿವರಿಸಿ, ಈಗಿನ ಕಾಲಘಟ್ಟದಲ್ಲಿ ಯುವ ಸಮುದಾಯ ದಿಕ್ಕುತಪ್ಪಿ ಡ್ರಗ್ಸ್ ಗಳಿಗೆ ಬಲಿಯಾಗಿ ಕುಟುಂಬಕ್ಕೂ, ಊರಿಗೂ ಭಾರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮೂರಿನ ಯುವ ಸಮೂಹ ನಿರಾಶ್ರಿತ ಕುಟುಂಬಕ್ಕೆ ಮನೆನಿರ್ಮಿಸಿ ಕೊಡುವ ತೀರ್ಮಾನ ಕೈಗೊಂಡದ್ದು ಇತರರಿಗೆ ಮಾದರಿಯಾಗಿದೆ. ಸಂಘಟನೆಯು ಸೃಷ್ಟಿಕರ್ತನ ಅನುಗ್ರಹದಿಂದ ಇನ್ನಷ್ಟು ಬಲಿಷ್ಠಗೊಂಡು ಬಡವರಿಗೆ ಸಮಾಜದಲ್ಲಿ ಹಿಂದುಳಿದವರಿಗೆ ಇನ್ನಷ್ಟು ಸೇವೆಯನ್ನು ನೀಡುವಂತಾಗಲಿ ಎಂದು ಶುಭಕೋರಿದರು.ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ಕುಕ್ಕಿಲ ಮನೆ ನಿರ್ಮಾಣದ ಆರಂಭದಿಂದ ಆದ ಎಲ್ಲಾ ವಿಚಾರಗಳನ್ನು ನೆರೆದವರಲ್ಲಿ ಹಂಚಿಕೊಂಡರು. ಮುಂದುವರಿದ ಭಾಗವಾಗಿ ಮನೆ ನಿರ್ಮಿಸಲು ಆರ್ಥಿಕ ಸಹಾಯ ನೀಡಿದ MNG ಫೌಂಡೇಶನ್ ಅಧ್ಯಕ್ಷರಾದ ಮನ್ಸೂರ್, ರಹ್ಮಾನಿಯಾ ಜುಮಾ ಮಸೀದಿ ಖತೀಬ್, ಬದ್ರೀಯಾ ಜುಮಾ ಮಸೀದಿ ಕುಕ್ಕಿಲ ಖತೀಬ್ ಮಾತನಾಡಿ ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಮರ್ಜೆನ್ಸಿ ಟೀಂ ಕೋಡಪದವು ತಂಡದ ಅದ್ಯಕ್ಷರಾದ ರಿಯಾಜ್ ತಾಳಿತ್ತನೂಜಿ,MNG ಫೌಂಡೇಶನ್ ಅದ್ಯಕ್ಷರಾದ ಮನ್ಸೂರ್ ಜಂಟಿಯಾಗಿ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹಾಜಿ. ಅಬ್ದುಲ್ಲಾ ಕುಕ್ಕಿಲ, ಗ್ರಾಮ ಪಂಚಾಯತ್ ಸದಸ್ಯರಾದ ಹರ್ಷದ್ ಕುಕ್ಕಿಲ, ಕೋಡಪದವು ಜುಮಾ ಮಸೀದಿ ಅಧ್ಯಕ್ಷರಾದ ಅಬೂಬಕ್ಕರ್, MNG ಫೌಂಡೇಶನ್ ಅಧ್ಯಕ್ಷರಾದ ಮನ್ಸೂರ್, ಕೋಡಪದವು ನ್ಯಾಯಬೆಲೆ ಅಂಗಡಿ ಮಾಲಕರಾದ ರಹಿಮಾನ್ ಕೋಡಪದವು, ಫಾರೂಕ್ ಟೆಕ್ನಿಕ್, ಎಮರ್ಜೆನ್ಸಿ ಟೀಂ ಕೋಡಪದವು ತಂಡದ ಅಡ್ಮಿನ್ ಸದಸ್ಯರು, MNG ಫೌಂಡೇಶನ್ ಸದಸ್ಯರು ಸಹಿತ ಸ್ಥಳೀಯರು ಉಪಸ್ಥಿತರಿದ್ದರು.
ಹಸೈನಾರ್ ತಾಳಿತ್ತನೂಜಿ ಸ್ವಾಗತಿಸಿದರು. ಕುಕ್ಕಿಲ ದಾರಿಮಿ ವಂದಿಸಿದರು.




