ಜಗತ್ತಿನ ನಾಗರಿಕತೆಯ ತೊಟ್ಟಿಲು ಅಂದ್ರೆ ಅದು ಭಾರತ ಅಂತ ಹೇಳುತ್ತಾನೆ ಖ್ಯಾತ ಇತಿಹಾಸಕಾರ ವಿಲ್ ಡ್ಯುರೆಂಟ್. ಭಾರತ ವೇದ, ಉಪನಿಷತ್ತುಗಳ ಮೂಲಕವೇ ಜಗತ್ತಿಗೆ ಜ್ಞಾನದ ಬೆಳಕು ನೀಡಿದೆ ಅಂತ ಅನೇಕ ಪಂಡಿತರು, ಇತಿಹಾಸಕಾರರು, ತತ್ವಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಅದೇ ರೀತಿ ಸದ್ಯ ಜಗತ್ತಿನ ಎಲ್ಲಾ ಪ್ರತಿ ಮೂಲೆಯಲ್ಲೂ ಸನಾತನ ಧರ್ಮದ ಒಂದಲ್ಲ ಒಂದು ಅಂಶ ಕಾಣ ಸಿಗುತ್ತದೆ. ಅದಕ್ಕೆ ದೊಡ್ಡ ಸಾಕ್ಷಿಯಾಗಿ ನಿಂತಿದೆ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮೊಳಗಿದ ವೇದ ಮಂತ್ರದ ಘೋಷಣೆ.
ಬೆಂಗಳೂರು ಮೂಲದ ಅರ್ಚಕರಾದ ರಾಕೇಶ್ ಭಟ್ ಮತ್ತು ತಂಡದಿಂದ ಅಮೆರಿಕಾದಲ್ಲಿ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಓಂ ಶಾಂತಿ.. ಶಾಂತಿ… ಶಾಂತಿಃ ಎಂಬ ಮಂತ್ರವನ್ನು ಹೇಳಿದರು. ರಾಕೇಶ್ ಭಟ್ ಅವರು ಹೇಳಿದ ಮಂತ್ರಘೋಷ ಈಗ ಜಾಗತಿಕ ಸುದ್ದಿಯಾಗಿ ಮಾರ್ಪಟ್ಟಿದೆ. ಎಕ್ಸ್ ಖಾತೆಯಿಂದ ಹಿಡಿದು ಇನ್ಸ್ಟಾಗ್ರಾಮ್ ವರೆಗೂ ಅವರ ಮಂತ್ರಘೋಷಗಳ ವಿಡಿಯೋ ಶೇರ್ ಆಗುತ್ತಿದೆ.
ಬೆಂಗಳೂರಿನ ಮೂಲದವರಾದ ರಾಕೇಶ್ ಭಟ್ ಮತ್ತು ತಂಡದಿಂದ ವೇದಮಂತ್ರ ಘೋಷಣೆಯಾಗಿದೆ. ಅಮೆರಿಕಾದ ಮೇರಿಲ್ಯಾಂಡ್ನಲ್ಲಿ ಶ್ರೀ ಶಿವ ವಿಷ್ಣು ದೇವಾಲಯದಲ್ಲಿ ಅರ್ಚಕರಾಗಿರುವ ರಾಕೇಶ್ ಭಟ್, ಉಡುಪಿಯ ಪೇಜಾವರ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ವೇದ ಅಧ್ಯಯನ ಮಾಡಿದವರು. ಮಂತ್ರಾಲಯ, ಉತ್ತರಾಧಿಮಠ, ಉಡುಪಿ ಅಷ್ಟ ಮಠಗಳಿಂದ ಶತಶಾಸ್ತ್ರ ವಿದ್ವಾನ್ ಆಗಿರುವ ರಾಕೇಶ್ ಭಟ್ ಈ ಹಿಂದೆ ಉಡುಪಿ ಅಷ್ಟ ಮಠ, ಬದರಿನಾಥ ದೇವಾಲಯ, ಸೇಲಂನ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದಿ, ತಮಿಳು ತೆಲಗು, ಕನ್ನಡ, ತುಳು ಇಂಗ್ಲಿಷ್ ಸಂಸ್ಕೃತ ಸೇರಿ ಒಟ್ಟು 7 ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದಾರೆ ರಾಕೇಶ್ ಭಟ್.