ಕಾಸರಗೋಡು: ನರ್ಸ್ ರಂಜಿತಾ ಸಾವನ್ನು ವ್ಯಂಗ್ಯಮಾಡಿದ್ದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕಿನ ಡೆಪ್ಯೂಟಿ ತಹಶೀಲ್ದಾರ್ ಪವಿತ್ರನ್ ಅವರನ್ನು ಕೇರಳ ಸರ್ಕಾರ ಅಮಾನತು ಮಾಡಿದೆ.

ಕೇರಳ ಸರ್ಕಾರಕ್ಕೆ ರಜೆ ಸಲ್ಲಿಸಿ ಹೋಗಿದ್ದಕ್ಕೆ ರಂಜಿತಾಗೆ ಸಾವು ಎಂದು ಸೋಷಿಯಲ್ ಮೀಡಿಯಾದಲ್ಲಿ ಪವಿತ್ರನ್ ವ್ಯಂಗ್ಯವಾಗಿ ಕಮೆಂಟ್ ಹಾಕಿದ್ದರು. ಇನ್ನೊಂದು ಪೋಸ್ಟ್ ಮಾಡಿ ಆಕೆ ಇನ್ನೂ ಎತ್ತರಕ್ಕೇರಲಿ ಎಂದು ಪವಿತ್ರನ್ ಕಮೆಂಟ್ ಮಾಡಿದ್ದರು.
ಪವಿತ್ರನ್ ಪೋಸ್ಟ್ಗೆ ಕೇರಳದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಿಎಂ ಪಿಣರಾಯಿ ವಿಜಯನ್ ಅವರಿಗೆ ಆನ್ಲೈನ್ನಲ್ಲಿ ಹಲವು ಮಂದಿ ದೂರು ಸಲ್ಲಿಸಿದ್ದರು. ಈ ದೂರಿನ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಬಶೇಖರನ್ ಪವಿತ್ರನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಯುಕೆಯಲ್ಲಿ ನರ್ಸ್ ಆಗಿದ್ದ ರಂಜಿತಾ ರಜೆಯ ಮೇಲೆ ಕೇರಳಕ್ಕೆ ಬಂದಿದ್ದರು. ರಂಜಿತಾ ಅವರಿಗೆ ಕೇರಳ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಸಹಿ ಹಾಕಲು ಕೇರಳಕ್ಕೆ ಆಗಮಿಸಿದ್ದರು. ಆದರೆ ಯುಕೆ ಆಸ್ಪತ್ರೆಯಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಪೂರ್ಣಗೊಳಿಸಲು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.




