
ಹಾಸನ: ಜಿಲ್ಲೆಯಲ್ಲಿ 750 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಪ್ರತಿ ಗ್ರಾಮದಲ್ಲೂ ಹೈನುಗಾರಿಕೆ ಉತ್ತೇಜಿಸಲು ಹಾಲು ಸಂಗ್ರಹಣ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ತಾಲೂಕಿನ ಕಿನ್ನರಹಳ್ಳಿ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ಉಪ ಕಸುಬಾಗಿ ರೈತರು ಹೈನುಗಾರಿಕೆಯನ್ನು ಅನುಸರಿಸಬೇಕಿದೆ, ಇದರಿಂದ ಆರ್ಥಿಕವಾಗಿ ಕೃಷಿಕರಿಗೆ ಅನುಕೂಲವಾಗಲಿದೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಹಳೇಯ ಪದ್ದತಿ ಅನುಸರಿಸಬೇಕು,ಇಂದಿನ ಜಾಗತಿಕ ಯುಗದಲ್ಲಿ ಎಲ್ಲ ಬೆಳೆಗಳಿಗೂ ಕೀಟನಾಶಕ ಸಿಂಪಡಣೆ, ರಾಸಾಯನಿಕ ಗೊಬ್ಬರ ಬಳಕೆ ಅತಿಯಾಗಿದೆ.
ಇದರಿಂದ ಯುವಕರಲ್ಲೂ ಅನಾರೋಗ್ಯ ಮತ್ತು ಅಕಾಲಿಕ ಮರಣ ಸಂಭವಿಸುತ್ತಿದೆ. ಇವುಗಳನ್ನು ಮನಗಂಡ ರೈತರು ತಿಪ್ಪೆ ಗೊಬ್ಬರ, ಸಾವಯವ ಮಣ್ಣಿಗೆ ಸೇರಿಸಿ ಫಲವತ್ತತೆ ಹೆಚ್ಚಿಸಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ರಾಷ್ಟ್ರೀಯ ಪಶು ಪೋಷಣಾ ಶರೀರ ಕ್ರಿಯಾ ಸಂಶೋಧನಾ ಕೇಂದ್ರದ ಡಾ.ಸೆಲ್ವರಾಜ್
ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗ, ಚರ್ಮಗಂಟು ರೋಗ ತಡೆಗೆ ಈಗಾಗಲೇ ಲಸಿಕೆ ಹಾಕಲಾಗಿದೆ, ಮಳೆಗಾಲ, ಬೇಸಿಗೆ ಕಾಲವನ್ನು ಆಧರಿಸಿ ಜಾನುವಾರುಗಳಿಗೆ ಇಂತಿಷ್ಟು ನಿಗಧಿತ ಪ್ರಮಾಣದಲ್ಲಿ ಹಸಿರು ಮೇವು, ಒಣ ಮೇವು ನೀಡಬೇಕು,ಎಂದು ತಿಳಿಸಿದರು.




