ಚಿಕ್ಕಮಗಳೂರು: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಬಂದ ಇಬ್ಬರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದ ಘಟನೆ ಚಿಕ್ಕಮಗಳೂರಿನ ಖಾಸಗಿ ಖಾಲೇಜಿನಲ್ಲಿ ನಡೆದಿದೆ.

ಕಾಲೇಜಿನ ಸಮವಸ್ತ್ರದ ಜೊತೆ ಇಬ್ಬರು ಕಪ್ಪು ವಸ್ತ್ರ ಧರಿಸಿದ್ದರು. ಇದರಿಂದಾಗಿ ಮಾಲೆ ತೆಗೆದು ಬನ್ನಿ ಎಂದು ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಹೊರಗೆ ನಿಲ್ಲಿಸಿದೆ. ಕಾಲೇಜಿಗೆ ಹಿಂದೂ ಸಂಘಟನೆಗಳ ಮುಖಂಡರು, ಬಜರಂಗದಳದ ಮುಖಂಡರು, ಬಿಜೆಪಿ (BJP) ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಭೇಟಿ ನೀಡಿ ಕಾಲೇಜು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬುರ್ಖಾ ಹಾಕಿಕೊಂಡು ಬರ್ತಾರಲ್ಲ ಅವಾಗ ಸುಮ್ಮನಿರುತ್ತೀರಿ. ಈಗ ಯಾಕೆ ಸಮಸ್ಯೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಈ ವರ್ಷದಿಂದ ಮಾಲೆ ಹಾಕಿ ಬರುವಂತಿಲ್ಲ ಎಂದು ಆದೇಶವಾಗಿದೆ ಎಂದ ಆಡಳಿತ ಮಂಡಳಿ ಹೇಳಿದೆ. ಅದು ಸರ್ಕಾರದ ಆದೇಶವಲ್ಲ. ಕಾಲೇಜು ಆಡಳಿತ ಮಂಡಳಿ ಮಾಡಿಕೊಂಡಿರೋ ಆದೇಶ. ಸರ್ಕಾರಿ ಅಧಿಕಾರಿಗಳೇ ಮಾಲೆ ಹಾಕಿ ಕೆಲಸ ಮಾಡ್ತಾರೆ ಎಂದು ಬಿಜೆಪಿ-ಬಜರಂಗದಳ ಕಾರ್ಯಕರ್ತರು ವಾದಿಸಿದ್ದಾರೆ.
ಪ್ರಿನ್ಸಿಪಾಲ್ ರೂಮ್ನಲ್ಲೇ ಕಾರ್ಯಕರ್ತರು ಅಯ್ಯಪ್ಪ ಸ್ವಾಮಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಅಂತಿಮವಾಗಿ ವಿದ್ಯಾರ್ಥಿಗಳನ್ನ ತರಗತಿಯಲ್ಲಿ ಕೂರಿಸಲು ಆಡಳಿತ ಮಂಡಳಿ ಒಪ್ಪಿಕೊಂಡಿದೆ.




