ಬೆಳ್ತಂಗಡಿ: “ಯಾವುದೇ ಕಾರಣಕ್ಕೂ ವಿದ್ಯುತ್ ನ್ನು ಖಾಸಗೀಕರಣ ಮಾಡಲು ಬಿಡಬಾರದು, ದೇಶದ ಸಂಪತ್ತನ್ನು ಖಾಸಗೀಕರಣಕ್ಕೆ ನೀಡಬಾರದು. ಅದಾನಿ, ಅಂಬಾನಿಗಳಿಗೆ ಸಂಸ್ಥೆಗಳನ್ನು ಮಾರಾಟ ಮಾಡಿದರೆ ಈ ದೇಶಕ್ಕೆ ಉಳಿಗಾಲವಿಲ್ಲ” ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.
ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಜೆಸಿಟಿಯು, ಹಲವು ರೈತ ಸಂಘಟನೆಗಳ ಸಂಯುಕ್ತ ರೈತ ಮೋರ್ಚ, ರಾಷ್ಟ್ರೀಯ ಪಕ್ಷಗಳಾದ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ, ಸಿಪಿಐ(ಎಂ) ಪಕ್ಷ, ಯುವ ಕಾಂಗ್ರೇಸ್, ಮಹಿಳಾ ಕಾಂಗ್ರೇಸ್, ಡಿ.ವೈ.ಎಫ್.ಐ., ಜೆ.ಎಂಎಸ್, ಕರ್ನಾಟಕ ರಾಜ್ಯ ರೈತ ಸಂಘಟನೆಗಳು ಮೊದಲಾದ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಕೇಂದ್ರ ಸರಕಾರ ತರಲು ಉದ್ದೇಶಿಸಿದ ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯಬೇಕು. ವಿದ್ಯುತ್ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿ ನ.22 ರಂದು ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಿಐಟಿಯು ಮುಖಂಡ ಬಿ.ಎಂ.ಭಟ್ ಮಾತನಾಡಿ “ಮಾನವನ ಜೀವನ ನಿರ್ವಹಣೆಗೆ ವಿದ್ಯುತ್ ಅತ್ಯಗತ್ಯ. ಮಾಧ್ಯಮ, ಸಾರಿಗೆ, ವಿಮಾನ ಮತ್ತು ರೈಲ್ವೇಯನ್ನು ಕೇಂದ್ರ ಸರಕಾರ ಉದ್ಯಮಿಗಳಿಗೆ ಮಾರಾಟ ಮಾಡಿದೆ. ಖಾಸಗೀಕರಣಕ್ಕೆ ಹಿಂದೂ ಧರ್ಮವನ್ನು ಮೂಲ ಆಧಾರವನ್ನಾಗಿಸಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿದೆ. ಇದೀಗ ಮೋದಿಯವರು ಪ್ರಾರಂಭಿಸಿದ್ದಾರೆ ಇದರ ವಿರುದ್ಧ ಯಾರು ಧ್ವನಿ ಎತ್ತಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಆದಿತ್ಯ ನಾರಾಯಣ ಕೊಲ್ಲಾಜೆ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್, ರೈತ ಮುಖಂಡ ಸುರೇಶ್ ಭಟ್ ಕೊಜಂಬೆ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಪ್ರಮುಖರಾದ ಜಯವಿಕ್ರಮ ಕಲ್ಲಾಪು, ಉಷಾ ಶರತ್, ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ ಕಾಂಗ್ರೆಸ್ ಪಕ್ಷದ ನಾನಾ ಘಟಕದ ಅಧ್ಯಕ್ಷರುಗಳು, ಸದಸ್ಯರು ಹಾಗೂ ಸಿಐಯುಟಿಯ ಸದಸ್ಯರುಗಳು ಉಪಸ್ಥಿತರಿದ್ದರು. ಪ್ರಟಿಭಟನೆ ಬೆಳ್ತಂಗಡಿ ಬಸ್ ನಿಲ್ದಾಣ ಬಳಿಯಿಂದ ಮೆಸ್ಕಾಂ ಕಚೇರಿಯವರೆಗೆ ಕಾಲ್ನಡಿಗೆಯ ಜಾಥ ಮೂಲಕ ಪ್ರಟಿಭಟನೆ ಸಾಗಿತು. ಬಳಿಕ ಮೆಸ್ಕಾಂ ಇಲಾಖೆ ಎಇಇ ಕ್ಷೆಮೆಂಟ್ ಬೆಂಜಮಿನ್ ಬ್ರಾಕ್ಸ್ ರವರ ಮೂಲಕ ಮನವಿಯನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಲಾಯಿತು.