ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಅಡಿಕೆ ಕಳ್ಳತನ ಮಾಡಿದ ನಾಲ್ವರನ್ನು ಬಂಧಿಸಿದ್ದಾರೆ.
ಬಡಗನ್ನೂರು ಕೊಯ್ಲ ನಿವಾಸಿ ಶ್ರವಣ್.ಕೆ, ಬಾಣಪದವು ಜಯಚಂದ್ರ, ನಿಡ್ಪಳ್ಳಿ ಡೊಬ್ಬಟ್ಟಗಿರಿಯ ಅಶೋಕ, ನಿಡ್ಪಳ್ಳಿ ಕಲ್ಲಮೂಲೆಯ ಪುನೀತ್ ಬಂಧಿತ ಆರೋಪಿಗಳಾಗಿದ್ದಾರೆ.
ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೊಯ್ಲ ಎಂಬಲ್ಲಿರುವ ನವೀನ್ ಕುಮಾರ್ ರೈ ಅವರ ಹಳೆ ಮನೆ ಕೊಟ್ಟಿಗೆಯ ಅಟ್ಟದಲ್ಲಿದ್ದ ಎನ್ ಕೆ ಆರ್ ಎಂದು ಮಾರ್ಕ್ ಮಾಡಿರುವ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 105/2023 ಕಲಂ:454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಖಚಿತ ಮಾಹಿತಿ ಮೇರೆಗೆ ಪತ್ತೆ ಹಚ್ಚಿದ್ದು, ಆರೋಪಿಗಳನ್ನು ಬಂಧಿಸಿ, ಸುಮಾರು ರೂ. 1,55,925/- ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ. 4,15,925/- ಆಗಿರುತ್ತದೆ.
ಈ ಪ್ರಕರಣವನ್ನು ಭೇದಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ ರಿಷ್ಯತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎಮ್ ಎನ್ ರವರ ನಿರ್ದೇಶನದಲ್ಲಿ ಪುತ್ತೂರು ಉಪಾಧೀಕ್ಷಕರಾದ ಡಾ| ಗಾನ ಪಿ. ಕುಮಾರ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ ಬಿ.ಎಸ್ ಅವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ ರವರ ನೇತೃತ್ವದಲ್ಲಿ ಎಎಸ್ಐ ಮುರುಗೇಶ್, ಸಿಬ್ಬಂದಿಗಳಾದ ಬಾಲಕೃಷ್ಣ, ಅದ್ರಾಮ, ಪ್ರವೀಣ್ ರೈ, ಹರೀಶ್ ಗೌಡ, ದಯಾನಂದ, ಸುಂದರ್, ವೆಂಕಪ್ಪ, ಸಲೀಂ, ನಾಗೇಶ್ ಕೆ ಸಿ, ಮುನಿಯ ನಾಯ್ಕ, ಕಾರ್ತಿಕ್, ಯುವರಾಜ ನಾಯ್ಕ, ಚಾಲಕರಾದ ಯೋಗೀಶ್ ಅವರು ಯಶಸ್ವಿಯಾಗಿದ್ದಾರೆ.