ರಜನೀಕಾಂತ್ (Rajinikanth) ಭಾರತದ ಟಾಪ್ ಸೂಪರ್ ಸ್ಟಾರ್. ರಜನೀಕಾಂತ್ ಜೊತೆಗೆ ನಟಿಸಲು, ರಜನೀಕಾಂತ್ ಜೊತೆಗೆ ತೆರೆಯ ಮೇಲೆ ಕಾಣಿಸಿಕೊಳ್ಳಲು ದೊಡ್ಡ-ದೊಡ್ಡ ಸ್ಟಾರ್ ನಟರೇ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ರಜನೀಕಾಂತ್ ಜೊತೆಗೆ ಅವರ ಸರಿ ಸಮನಾಗಿ ನಟಿಸುವ ಅವಕಾಶ ಬಂದರೂ ಸಹ ತೆಲುಗಿನ ಸ್ಟಾರ್ ನಟರೊಬ್ಬರು ಒಲ್ಲೆ ಎಂದಿದ್ದಾರೆ. ಆದರೆ ಇದು ರಜನೀಕಾಂತ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ನಂದಮೂರಿ ಬಾಲಕೃಷ್ಣ ತೆಲುಗು ಚಿತ್ರರಂಗದ ಸ್ಟಾರ್ ನಟ ಜೊತೆಗೆ ಸಕ್ರಿಯ ಶಾಸಕರೂ ಹೌದು. ಇದೀಗ ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾನಲ್ಲಿ ಬಾಲಕೃಷ್ಣ ಅವರು ಅತಿಥಿ ಪಾತ್ರದಲ್ಲಿ ನಟಿಸಬೇಕೆಂದು ಸಿನಿಮಾದ ನಿರ್ದೇಶಕ ನೆಲ್ಸನ್ ಮನವಿ ಮಾಡಿದ್ದರು. ಆದರೆ ಬಾಲಕೃಷ್ಣ ಅವಕಾಶಕ್ಕೆ ನೋ ಹೇಳಿದ್ದಾರೆ. ತಾವು ತೆಲುಗು ಸಿನಿಮಾಗಳಲ್ಲಿ ಹೊರತಾಗಿ ಪರಭಾಷೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.
‘ಜೈಲರ್’ ಸಿನಿಮಾನಲ್ಲಿ ಶಿವರಾಜ್ ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್, ಕಿಶೋರ್, ಸುನಿಲ್ ಇನ್ನಿತರೆ ನಟರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಅದೇ ಸಿನಿಮಾನಲ್ಲಿ ಬಾಲಕೃಷ್ಣ ಸಹ ನಟಿಸಬೇಕೆಂಬುದು ನೆಲ್ಸನ್ ಆಸೆಯಾಗಿತ್ತು. ಆದರೆ ಅವರಿಗಾಗಿ ಸೃಷ್ಟಿಸಿದ ಪಾತ್ರ ಸರಿಯಾಗಿ ಮೂಡಿಬರದೇ ಇದ್ದ ಕಾರಣಕ್ಕೆ ‘ಜೈಲರ್’ ಸಿನಿಮಾನಲ್ಲಿ ನಟಿಸುವಂತೆ ಬಾಲಯ್ಯ ಅವರನ್ನು ಕೇಳಿರಲಿಲ್ಲ. ಆದರೆ ‘ಜೈಲರ್ 2’ ಸಿನಿಮಾನಲ್ಲಿ ಅವರಿಗಾಗಿ ವಿಶೇಷ ಪಾತ್ರ ಇರಲಿದೆ ಎಂದು ನೆಲ್ಸನ್ ಹೇಳಿದ್ದರು. ಅದರಂತೆ ಅವರಿಗಾಗಿ ಪಾತ್ರ ಸೃಷ್ಟಿಯೂ ಆಗಿತ್ತು. ಆದರೆ ಈಗ ಬಾಲಯ್ಯ ತಾವು ‘ಜೈಲರ್ 2’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.
ಚಂದ್ರಬಾಬು ನಾಯ್ಡು, ಬಾಲಕೃಷ್ಣ ಕಳೆದ ಆಂಧ್ರ ಪ್ರದೇಶ ಚುನಾವಣೆಗೆ ಮುಂಚೆ ಆಯೋಜಿಸಿದ್ದ ಎನ್ಟಿಆರ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಜನೀಕಾಂತ್ ವಿಶೇಷ ಅತಿಥಿಯಾಗಿ ಭಾಗಿ ಆಗಿದ್ದರು. ಆ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಹಾಗೂ ಬಾಲಯ್ಯ ಅವರಿಗೆ ಜನ ಬೆಂಬಲ ನೀಡಬೇಕು ಎಂದು ಪರೋಕ್ಷವಾಗಿ ರಾಜಕೀಯ ಪ್ರಚಾರವನ್ನೂ ಸಹ ರಜನೀಕಾಂತ್ ಮಾಡಿದ್ದರು. ಈಗ ‘ಜೈಲರ್ 2’ ಸಿನಿಮಾನಲ್ಲಿ ನಟಿಸುವ ಮೂಲಕ ರಜನೀಕಾಂತ್ ಅವರಿಗೆ ಋಣಸಂದಾಯ ಮಾಡುವ ಅವಕಾಶ ಬಾಲಕೃಷ್ಣ ಅವರಿಗೆ ಇತ್ತು. ಆದರೆ ಅವರು ತಮ್ಮ ಅಹಂನಿಂದಾಗಿ ಆ ಅವಕಾಶವನ್ನು ಕಳೆದುಕೊಂಡಿದ್ದಾರೆ. ಇದು ಸಹಜವಾಗಿಯೇ ರಜನೀ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
‘ಜೈಲರ್’ ಸಿನಿಮಾನಲ್ಲಿ ನಟಿಸಿದ್ದ ಬಹುತೇಕ ಅತಿಥಿ ನಟರುಗಳು ‘ಜೈಲರ್ 2’ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ‘ಜೈಲರ್’ ಸಿನಿಮಾನಲ್ಲಿ ಶಿವಣ್ಣನ ನರಸಿಂಹ ಪಾತ್ರ ಸಖತ್ ಹೈಲೆಟ್ ಆಗಿತ್ತು. ರಜನೀಕಾಂತ್ ಪಾತ್ರದಷ್ಟೆ ಅದೂ ಸಹ ಹಿಟ್ ಆಗಿತ್ತು. ಇದೀಗ ‘ಜೈಲರ್ 2’ ಸಿನಿಮಾನಲ್ಲಿಯೂ ಸಹ ಶಿವಣ್ಣ ನರಸಿಂಹ ಪಾತ್ರದಲ್ಲಿಯೇ ನಟಿಸಲಿದ್ದಾರೆ. ಅವರೊಟ್ಟಿಗೆ ಮೋಹನ್ಲಾಲ್, ಜಾಕಿ ಶ್ರಾಫ್ ಜೊತೆಗೆ ಇನ್ನೂ ಕೆಲವು ಸ್ಟಾರ್ ನಟರುಗಳು ಸಿನಿಮಾನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.





