ರಾಜ್ಯೋತ್ಸವ ವಿಶೇಷ: ಕನ್ನಡ ಮತ್ತು ಕನ್ನಡ ಚಿತ್ರರಂಗ

Share with

ಇಂದು ಕನ್ನಡ ರಾಜ್ಯೋತ್ಸ, ಕನ್ನಡ ಚಿತ್ರರಂಗವು (Sandalwood) ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಇತಿಹಾಸದ ಪ್ರಮುಖ ಪ್ರಸಾರಕ ಮತ್ತು ಪ್ರಚಾರಕವಾಗಿ ದಶಕಗಳಿಂದಲೂ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಚಿತ್ರರಂಗವು ಕನ್ನಡ ಭಾಷೆ ಮತ್ತು ಕನ್ನಡಿಗರ ಏಳ್ಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಕನ್ನಡ ರಾಜ್ಯೋತ್ಸವದಂದು ಈ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ…

ಮದ್ರಾಸಿನಲ್ಲಿ ಅವಮಾನಗಳನ್ನು ಸಹಿಸಿಕೊಂಡು, ದಬ್ಬಾಳಿಕೆಗೆ ಒಳಪಟ್ಟು ಕಷ್ಟಗಳ ಮಧ್ಯೆಯೇ ಕನ್ನಡ ಸಿನಿಮಾಗಳನ್ನು ಚಿತ್ರೀಕರಿಸಿ ಕನ್ನಡಿಗರಿಗೆ ನೀಡುತ್ತಿದ್ದ ಚಿತ್ರರಂಗದ ಆಗಿನ ಹಿರಿಯರು ದಿಟ್ಟ ನಿರ್ಧಾರ ಮಾಡಿ ಇಡೀ ಚಿತ್ರರಂಗವನ್ನು ಬೆಂಗಳೂರಿಗೆ ತಂದಿದ್ದು ಐತಿಹಾಸಿಕ ನಿರ್ಣಯ. ಇದರಿಂದ ಸಾಕಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗಗಳು ದೊರಕಿತು, ಕನ್ನಡ ಚಿತ್ರರಂಗ ಸ್ವಂತ ಕಾಲಮೇಲೆ ನಿಂತು, ಸ್ಪಷ್ಟ ಉದ್ಯಮವಾಗಿ ರೂಪುಗೊಳ್ಳುವಂತೆ ಆಯ್ತು. ಮುಖ್ಯವಾಗಿ ಕನ್ನಡಿಗರ ಸ್ವಾಭಿಮಾನದ ಪರಿಚಯ ನೆರೆ ಹೊರೆಯವರಿಗೆ ಆಯಿತು.

ಐತಿಹಾಸಿಕ, ಸಾಮಾಜಿಕ ಹೀಗೆ ಹಲವು ವಿಧದ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಕನ್ನಡಿಗರಲ್ಲಿ ಸಾಮಾಜಿಕ ಜಾಗೃತಿ, ವೈಚಾರಿಕ ಜಾಗೃತಿ, ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಕನ್ನಡ ಸಿನಿಮಾಗಳು ಯಶಸ್ವಿ ಆಗಿವೆ. ‘ಬಂಗಾರದ ಮನುಷ್ಯ’, ‘ಮೇಯರ್ ಮುತ್ತಣ್ಣ’, ‘ಮಂತ್ರಾಲಯ ಮಹಾತ್ಮೆ’, ‘ಭೂತಯ್ಯನ ಮಗ ಅಯ್ಯು’ ಇನ್ನೂ ಹಲವು ಸಿನಿಮಾಗಳನ್ನು ಉದಾಹರಣೆಯಾಗಿ ನೀಡಬಹುದು. ಸಾಕ್ಷರತೆಗಾಗಿ ಮಾಡಿದ ಸಿನಿಮಾಗಳು, ಜೀತ ವಿರೋಧಿ ಸಿನಿಮಾಗಳು, ಕುಡಿತ ವಿರೋಧಿ ಸಿನಿಮಾಗಳು ಇನ್ನೂ ಹಲವಾರು ಸಿನಿಮಾಗಳು ಸಾಮಾಜಿಕ ಬದಲಾವಣೆಗೆ ಕಾರಣವಾದವು.

ಕನ್ನಡದ ಪರ, ಕನ್ನಡಿಗರ ಪರವನ್ನು ಕನ್ನಡ ಚಿತ್ರರಂಗ ಬಿಟ್ಟುಕೊಟ್ಟಿದ್ದಿಲ್ಲ. ಗೋಕಾಕ್ ಚಳುವಳಿ ಮಾತ್ರವಲ್ಲ ಅದಕ್ಕೆ ಮುಂಚಿನಿಂದಲೂ ಸಹ ಕನ್ನಡ ಚಿತ್ರರಂಗ ಕನ್ನಡಿಗರ ಪರ ನಿಂತಿತೆ. ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿದೆ. ಸಣ್ಣ-ಪುಟ್ಟ ನೈಸರ್ಗಿಕ ಅನಾಹುತಗಳಾದಾಗಲೂ ಸಹ ರಾಜ್ಕುಮಾರ್, ವಿಷ್ಣುವರ್ಧನ್ ಸೇರಿ ಹಲವು ನಟ-ನಟಿಯರು ಬೀದಿಗೆ ಇಳಿದು ದೇಣಿಗೆ ಸಂಗ್ರಹಿಸುತ್ತಿದ್ದರು. ದೇಣಿಗೆ ಸಂಗ್ರಹಿಸಲು ನಾಟಕ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು, ಇತ್ತೀಚೆಗೆ ಆ ಸಂಪ್ರದಾಯ ಇಲ್ಲ.

ಗೋಕಾಕ್ ಚಳುವಳಿ ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖ ಚಳವಳಿ. ಕನ್ನಡ ಚಿತ್ರರಂಗ ಕನ್ನಡ ಪರವಾಗಿ ಎಷ್ಟು ಬದ್ಧತೆ ಹೊಂದಿದೆ ಎಂಬುದಕ್ಕೆ ಉದಾಹರಣೆ. ಗೋಕಾಕ್ ಚಳುವಳಿಯನ್ನು ಮುನ್ನಡೆಸಿದ್ದೇ ಕನ್ನಡ ಚಿತ್ರರಂಗ. ಅದರಲ್ಲೂ ವಿಶೇಷವಾಗಿ ಡಾ ರಾಜ್ಕುಮಾರ್. ಕರ್ನಾಟಕದ ಮೇಲೆ ಕನ್ನಡ ಭಾಷೆಯ ಮೇಲೆ ಗೋಕಾಕ್ ಚಳವಳಿಯ ಪ್ರಭಾವವನ್ನು ವಿವರಿಸುವುದು ಸುಲಭ ಸಾಧ್ಯವಲ್ಲ.

ನೆಲ-ಜಲದ ವಿಷಯವಾಗಿಯೂ ಚಿತ್ರರಂಗ ಸದಾ ನಿಂತಿದೆ. ಬೆಳಗಾವಿ ಗಡಿ ಸಮಸ್ಯೆ, ಕಾಸರಗೋಡು ಸಮಸ್ಯೆಗಳ ಬಗ್ಗೆ ಚಿತ್ರರಂಗ ಸದಾ ಕನ್ನಡಪರ ನಿಲವು ವ್ಯಕ್ತಪಡಿಸಿದೆ. ಇನ್ನು ಕಾವೇರಿ ಜಲ ವಿವಾದದಲ್ಲಂತೂ ಪ್ರತಿ ಬಾರಿಯೂ ಸಹ ಚಿತ್ರರಂಗ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ರಾಜ್ಕುಮಾರ್ ಇಂದ ಆರಂಭಿಸಿ ಈಗಿನ ಹಲವು ನಟರು ಸಹ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. 2023 ರಲ್ಲೂ ಸಹ ಚಿತ್ರರಂಗ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿತ್ತು.

ಸಿನಿಮಾಗಳ ಮೂಲಕ ಕನ್ನಡತನದ ಬಗ್ಗೆ ಕನ್ನಡಿಗರಲ್ಲಿ ಹೆಮ್ಮೆ, ಅಭಿಮಾನ ಮೂಡಿಸುವ ಕಾರ್ಯವನ್ನು ಕನ್ನಡ ಚಿತ್ರರಂಗ ಮಾಡಿದೆ. ಭಾಷೆಯ ಹಿರಿಮೆ ಬಗ್ಗೆ, ನಾಡಿನ ಹಿರಿಮೆ ಕನ್ನಡ ಸಿನಿಮಾಗಳಲ್ಲಿ ಇರುವಷ್ಟು ಹಾಡುಗಳು, ದೃಶ್ಯಗಳು ಭಾರತದ ಇನ್ಯಾವುದೇ ಭಾಷೆಯ ಸಿನಿಮಾಗಳಲ್ಲಿ ಇಲ್ಲ. ಭಾಷೆಯ ಬಗ್ಗೆ ಕನ್ನಡಿಗರಲ್ಲಿ ಅಭಿಮಾನ ಮೂಡಿಸುವಲ್ಲಿ ಕನ್ನಡ ಸಿನಿಮಾಗಳ ಪಾತ್ರ ಮಹತ್ವದ್ದು.

ಇತ್ತೀಚೆಗಂತೂ ‘ಕಾಂತಾರ’, ‘ರಂಗಿತರಂಗ’ ಇನ್ನೂ ಹಲವು ಸಿನಿಮಾಗಳ ಮೂಲಕ ಕನ್ನಡ ನೆಲದ ಆಚರಣೆಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಡುವ ಯತ್ನಗಳನ್ನು ಚಿತ್ರರಂಗ ಮಾಡುತ್ತಿದೆ. ಜೊತೆಗೆ ‘ಕೆಜಿಎಫ್’, ‘ವಿಕ್ರಾಂತ್ ರೋಣ’ ಇನ್ನೂ ಕೆಲ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತರಿಸುವ ಪ್ರಯತ್ನಗಳು ಸಹ ಯಶಸ್ವಿ ಆಗಿದ್ದು, ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗುವಂತಾಗಿದೆ.


Share with

Leave a Reply

Your email address will not be published. Required fields are marked *