
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ (RCB Chinnaswamy incident) 11 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ತನ್ನ ನೆಚ್ಚಿನ ತಂಡ 17 ವರ್ಷಗಳ ಬಳಿಕ ಟ್ರೋಫಿ ಗೆದ್ದಿದ್ದನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದ ಬಳಿ ಬಂದವರಿಗೆ ನರಕ ಸದೃಶ್ಯವಾಗಿದೆ. ಒಂದೆಡೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಸಾವು ನೋವುಗಳಿಂದ ನರಳುತ್ತಿದ್ದರೂ, ಇನ್ನೊಂದೆಡೆ ಕ್ರೀಡಾಂಗಣದೊಳಗೆ ಆರ್ಸಿಬಿ (RCB) ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಾವು ನೋವಿನ ನಡುವೆಯೂ ಫ್ರಾಂಚೈಸಿಯ ಈ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಘಟನೆ ನಡೆದ ಗಂಟೆಗಳೇ ಕಳೆದುಹೋದರು, ಫ್ರಾಂಚೈಸಿ ಕಡೆಯಿಂದ ಒಂದೇ ಒಂದು ಸಂತಾಪ ಸೂಚನೆ ಇಲ್ಲದಿರುವುದು ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿತ್ತು.
ವಾಸ್ತವವಾಗಿ, ಟ್ರೋಫಿ ಗೆದ್ದ ಸಂಭ್ರಮವನ್ನು ಆರ್ಸಿಬಿ ಫ್ರಾಂಚೈಸಿ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿತ್ತು. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಇಲ್ಲದಿರುವ ಕಾರಣ 11 ಆರ್ಸಿಬಿ ಅಭಿಮಾನಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ನೋವಿನ ನಡುವೆಯೂ ಆರ್ಸಿಬಿ ಫ್ರಾಂಚೈಸಿ ಸ್ಟೇಡಿಯಂ ಒಳಗೆ 15 ನಿಮಿಷಗಳ ಕಾರ್ಯಕ್ರಮ ನಡೆಸಿದೆ, ಅಲ್ಲದೆ ಈ ಅವಘಡದಿಂದ ಸಾವಿಗೀಡಾದವರ ಬಗ್ಗೆ ಆರ್ಸಿಬಿ ಒಂದೇ ಒಂದು ಹೇಳಿಕೆಯನ್ನು ಬಿಡುಗಡೆ ಮಾಡದಿರುವುದು ಎಲ್ಲರ ಕೋಪಕ್ಕೆ ಕಾರಣವಾಗಿತ್ತು.
ಆರ್ಸಿಬಿ ಶೋಕ ವ್ಯಕ್ತಪಡಿಸುತ್ತದೆ
ಇದೀಗ ತನ್ನ ತಪ್ಪಿನಿಂದ ಎಚ್ಚೆತ್ತುಕೊಂಡಿರುವ ಆರ್ಸಿಬಿ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ, ‘ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿರುವ ಅವಘಡದಿಂದ ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಈ ಅವಘಡದಿಂದಾಗಿ ಆಗಿರುವ ಜೀವಹಾನಿಗೆ ಆರ್ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ.ದಯವಿಟ್ಟು ಸುರಕ್ಷಿತವಾಗಿರಲು ನಮ್ಮ ಎಲ್ಲಾ ಅಭಿಮಾನಿಗಳ ಬಳಿ ಮನವಿ ಮಾಡುತ್ತೇವೆ ಎಂದು ಬರೆದುಕೊಂಡಿದೆ.