ಕಾಸರಗೋಡು : ನಗರದ ಖ್ಯಾತ ಹಿರಿಯ ವೈದ್ಯರೂ,ಧಾರ್ಮಿಕ ಮುಂದಾಳು ಆಗಿದ್ದ ಡಾ.ಬಿ.ಎಸ್.ರಾವ್ (ಬಾಯಾರು ಶಂಕರ ನಾರಾಯಣ ರಾವ್) (84) ದೈವಧೀನರಾಗಿದ್ದಾರೆ.

ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರನ್ನು ನಿನ್ನೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿದೆ.
ಕಾಸರಗೋಡು ನರ್ಸಿಂಗ್ ಹೋಮಿನ ಸ್ಥಾಪಕರಲ್ಲಿ ಪ್ರಮುಖರಾದ ಇವರು ಇತ್ತೀಚೆಗೆ ನಡೆದ ಮಧೂರು ದೇವಸ್ಥಾನ ನವೀಕರಣ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರೂ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರು ಆಗಿ ಸೇವೆ ಸಲ್ಲಿದ್ದರು. ಇದಲ್ಲದೆ ಜಿಲ್ಲೆಯ ಹಲವು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಎಡನೀರು ಮಠದ ಹಿಂದಿನ ಪೀಠಾಧಿಪತಿಗಳಾದ ಕೇಶವಾನಂದ ಭಾರತೀಶ್ರೀಪಾದರ ನಿಕಟ ಶಿಷ್ಯ ವರ್ಗದವರಲ್ಲಿ ಪರಮಾಪ್ತರಾಗಿದ್ದ ಬಿ.ಎಸ್.ರಾವ್ ಮಠದ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಕಾಸರಗೋಡು ಆಸ್ಪತ್ರೆಯನ್ನು ಸ್ಥಾಪಿಸಿ ಸ್ವತಃ ವೈದ್ಯ ವೃತ್ತಿಯ ಘನತೆ ಮೆರೆದು ಈ ಆಸ್ಪತ್ರೆಯನ್ನು ನಗರದ ವೈದ್ಯಕೀಯ ರಂಗದಲ್ಲಿಯೇ ಮುಂಚೂಣಿಗೆ ತಂದು ಕಿಮ್ಸ್ ಹಾಸ್ಪಿಟಲ್ ಎಂಬುದಾಗಿಸಿ ನರ್ಸಿಂಗ್ ತರಬೇತಿಯನ್ನು ಕೂಡ ಆರಂಭಿಸಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲನ್ನಾಗಿಸಿದುದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಾಸರಗೋಡು ಮೆಡಿಕೇರ್ ಸೆಂಟರ್ ಪ್ರ. ಲಿ. ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿದ್ದ ಅವರು ಮಧೂರು ಮೂಡಪ್ಪ ಸೇವಾ ಸಮಿತಿಯಲ್ಲೂ ಸೇವಾ ನಿರತರಾಗಿದ್ದರು. ಬಾಯಾರು ಪಂಚಲಿಂಗೇಶ್ವರ ದೇವಳದ ಆಡಳಿತ ಮೊಕೇಸರನಾಗಿದ್ದರು.
ಮೃತರು ಪತ್ನಿ ಪದ್ಮಾವತಿ ರಾವ್, ಪುತ್ರ ಡಾ.ಶಿವಪ್ರಸಾದ್ ರಾವ್,ಡಾ.ರೇಖಾ ಮಯ್ಯ, ರೂಪ ರಾವ್, ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.




