ಉಪ್ಪಿನಂಗಡಿ: ಆರೋಗ್ಯ ಸಂಬಂಧಿ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಆರ್ಥಿಕ ಸಹಾಯ ಬಯಸಿ ಮನವಿ ಸಲ್ಲಿಸಲ್ಪಟ್ಟರೆ, ಇತ್ತ ಮನವಿಯಲ್ಲಿ ಲಭಿಸಿದ ಸಂಪರ್ಕ ಸಂಖ್ಯೆಯನ್ನು ಬಳಸಿ ಮಂತ್ರಾಲಯದ ಶ್ರೀ ಗುರು ರಾಯರ ಮಠದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಂಕಷ್ಠದಲ್ಲಿದ್ದ ವ್ಯಕ್ತಿಯನ್ನೇ ವಂಚಿಸಿದ ಬಗ್ಗೆ ದೂರು ನೀಡಲಾಗಿದೆ.

ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ನಿವಾಸಿ ಯಶೋಧರ ಸಿಂಗ್ ಅವರು ಅನಾರೋಗ್ಯಪೀಡಿತರಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾದಾಗ ಅವರ ಚಿಕಿತ್ಸೆಗೆ ನೆರವಾಗುವ ಸಲುವಾಗಿ ಸಮಾಜದ ಬಂಧುಗಳು ಸಾಮಾಜಿಕ ಜಾಲತಾಣಗಳಲ್ಲಿ ಆರ್ಥಿಕ ಸಹಕಾರ ನೀಡಬೇಕೆಂದು ವಿನಂತಿಸಿ ಸಂದೇಶ ರವಾನಿಸಿದ್ದರು. ಈ ಮಾಹಿತಿ ಪಡೆದ ವಂಚಕರು ಸಂದೇಶದಲ್ಲಿದ್ದ ಯಶೋಧರ ಸಿಂಗ್ ಅವರ ಮಗ ಸುಧಾನುಷ್ ನ ಮೊಬೈಲ್ ಸಂಖ್ಯೆ ಸಂಪರ್ಕಿಸಿ, ಮಂತ್ರಾಲಯದ ಶ್ರೀ ರಾಯರ ಮಠದಿಂದ ಎಂದೂ, ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದು, ಮಠದಿಂದ 3 ಲಕ್ಷ ರೂ. ಆರ್ಥಿಕ ನೆರವು ನೀಡುತ್ತೇವೆ. ಸರಕಾರಿ ನಿಯಮದಂತೆ ಶೇ.10 ರಷ್ಟು ತೆರಿಗೆ ಪಾವತಿಸಬೇಕಾಗಿದ್ದು 30 ಸಾವಿರ ರೂ. ಮೊದಲೇ ಪಾವತಿಸಬೇಕೆಂದು ತಿಳಿಸಿದ್ದರು.
ಮಂತ್ರಾಲಯದ ಕರೆ ಎಂದು ನಂಬಿದ ಸುಧಾನುಷ್ ತನ್ನಲ್ಲಿದ್ದ 28 ಸಾವಿರ ರೂ.ಗಳನ್ನು ಕಳುಹಿಸಿದ್ದ. ತಿಳಿಸಲಾದ 3 ಲಕ್ಷ ರೂ. ಬಾರದೇ ಇದ್ದಾಗ ಮೋಸ ಹೋಗಿದ್ದು ಗೊತ್ತಾಗಿ ದೂರು ಸಲ್ಲಿಸಿದ್ದಾರೆ.
ಕರೆ ಬಂದ ಮೊಬೈಲ್ ಸಂಖ್ಯೆ ಟೂ ಕಾಲರ್ ನಲ್ಲಿ ಸಾಯೀದಾ ತಸ್ಲಿಮ್ ಹೆಸರಿನಲ್ಲಿತ್ತು.
ಆಗ್ರಹ
ಪ್ರಸಿದ್ದ ಧಾರ್ಮಿಕ ಕ್ಷೇತ್ರದ ಹೆಸರು ಬಳಸಿ ಅನಾರೋಗ್ಯ ಪೀಡಿತರನ್ನು, ಅದರಲ್ಲೂ ಆರ್ಥಿಕ ಸಂಕಷ್ಟದಲ್ಲಿರುವ ಮಂದಿಯನ್ನು ವಂಚಿಸಲೆತ್ನಿಸುವವರ ಪತ್ತೆ ಹಚ್ಚಿ ಕಠಿನ ಕ್ರಮ ಜರುಗಿಸಬೇಕೆಂದು ಇಳಂತಿಲ ಗ್ರಾ. ಪಂ. ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ ಆಗ್ರಹಿಸಿದ್ದಾರೆ.




