
ಉಡುಪಿ: ಅರಬ್ಬಿ ಸಮುದ್ರದ 16 ನಾಟಿಕಲ್ ಮೈಲ್ ದೂರದಲ್ಲಿ ಬಿದ್ದ ಮೀನುಗಾರನೊಬ್ಬನನ್ನು ಮತ್ತೊಂದು ಮೀನುಗಾರಿಕಾ ಬೋಟಿನ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಮಂಗಳವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಉಡುಪಿ ಜಿಲ್ಲೆಯ ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲ್ ದೂರ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡು ಮೂಲದ ಬೋಟ್ ನಿಂದ ಸುಮಾರು 25 ವರ್ಷ ಪ್ರಾಯದ ಓರ್ವ ಮೀನುಗಾರ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು. ಅವರನ್ನು ಎರಡು ದಿನಗಳಿಂದ ತಮಿಳುನಾಡು ಮೀನುಗಾರರು ಹುಡುಕುತ್ತಿದ್ದರೂ ಕೂಡ ಕಾಣ ಸಿಕ್ಕಿರಲಿಲ್ಲ, ಆದರೆ ಗಂಗೊಳ್ಳಿಯಿಂದ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟಿನಲ್ಲಿದ್ದ ಮೀನುಗಾರರಿಗೆ ಸಮುದ್ರದಲ್ಲಿ ಬಿದ್ದು ಈಜಾಡುತ್ತಿರುವ ವ್ಯಕ್ತಿಯೊಬ್ಬ ಕಾಣಿಸಿದ್ದಾನೆ. ಮೀನುಗಾರನನ್ನು ರಕ್ಷಿಸಿದ ಗಂಗೊಳ್ಳಿಯ ಮೀನುಗಾರರು ಬಳಿಕ ಅವರನ್ನು ತಮಿಳುನಾಡಿನ ಮೀನುಗಾರರಾ ದೋಣಿ ಹತ್ತಿಸಿ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.
ಇದೀಗ ಸಮುದ್ರದಲ್ಲಿ ಯುವಕನ ರಕ್ಷಣೆ ಮಾಡಿದ ಸಾಗರ್ ಬೋಟಿನ ಮೀನುಗಾರರ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.




