ಕೇರಳ: ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಿವೃತ್ತ IPS ಅಧಿಕಾರಿ ಹಾಗೂ ಬಿಜೆಪಿ ಅಭ್ಯರ್ಥಿ ಆರ್. ಶ್ರೀಲೇಖಾ ಅವರು ಎಡಪಂಥೀಯ ಪ್ರತಿಸ್ಪರ್ಧಿಯನ್ನು ಸುಮಾರು 700 ಮತಗಳ ಅಂತರದಿಂದ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 1987ರ ಬ್ಯಾಚ್ ನ ಕೇರಳ ಕೇಡರ್ IPS ಅಧಿಕಾರಿ ಆಗಿದ್ದ ಅವರು ಶನಿವಾರ ಸಸ್ತಮಂಗಲಂ ವಾರ್ಡ್ನಿಂದ ಆಯ್ಕೆಯಾಗಿದ್ದರೆ.

ಮಾಜಿ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ ಒಂದು ವೇಳೆ ಈ ಹುದ್ದೆಗೆ ನೇಮಕಗೊಂಡರೆ, ಅವರ ಬಡ್ತಿ ಕೇರಳ ರಾಜಧಾನಿಯ ಪ್ರಥಮ ಪ್ರಜೆಯ ಹುದ್ದೆಗೆ ಗಮನಾರ್ಹ ಬದಲಾವಣೆಗೆ ನಾಂದಿ ಹಾಡಲಿದೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ರಾಜ್ಯದಲ್ಲಿ ಬಿಜೆಪಿಗೆ ಪ್ರಮುಖ ರಾಜಕೀಯ ಮೈಲಿಗಲ್ಲು ತಂದುಕೊಟ್ಟಿದೆ. ತಿರುವನಂತಪುರಂ ಕಾರ್ಪೊರೇಷನ್ನಲ್ಲಿ 45 ವರ್ಷಗಳ ನಿರಂತರವಾದ ಎಡಪಕ್ಷದ ಪ್ರಾಬಲ್ಯವನ್ನು ಕೊನೆಗೊಳಿಸಿ, ಎನ್ಡಿಎ ಏಕೈಕ ಅತಿದೊಡ್ಡ ಬಣವಾಗಿ ಹೊರಹೊಮ್ಮಿದೆ.
101 ವಾರ್ಡ್ಗಳಲ್ಲಿ ಬಿಜೆಪಿ 50 ಸ್ಥಾನಗಳನ್ನು ಗೆದ್ದರೆ, ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ 29, ಕಾಂಗ್ರೆಸ್ ನೇತೃತ್ವದ ಯುಡಿಎಫ್ 19 ಮತ್ತು ಎರಡು ಸ್ಥಾನಗಳನ್ನು ಪಕ್ಷೇತರರು ಜಯಗಳಿಸಿದ್ದರು. ಈ ಬೆಳವಣಿಗೆಯೊಂದಿಗೆ, ಬಿಜೆಪಿ ಶ್ರೀಲೇಖಾ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಬಿಂಬಿಸಿದೆ, ಇದು ಸಾಂಪ್ರದಾಯಿಕವಾಗಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ನಿಯಂತ್ರಣ ಹೊಂದಿರುವ ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ಸಾಕ್ಷಿಯಾಗಲಿದೆ.




