ಉಳ್ಳಾಲ: ಕುತ್ತಾರು ದೆಕ್ಕಾಡಿನ ಕೊರಗಜ್ಜ ಆದಿಸ್ಥಳಕ್ಕೆ ಸ್ಯಾಂಡಲ್ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ದಂಪತಿ ಸಮೇತ ಭೇಟಿ ನೀಡಿ ಕೊರಗಜ್ಜನ ಆಶೀರ್ವಾದ ಪಡೆದುಕೊಂಡಿದ್ದಾರೆ. ಇಲ್ಲಿಗೆ ಬಂದಾಗ ಒಂದು ರೀತಿಯ ನೆಮ್ಮದಿ ಇದೆ. ನಂಬಿಕೆಯ ಕಾರಣದಿಂದ ಈ ಭಾಗಕ್ಕೆ ಬಂದಾಗ ಭೇಟಿ ನೀಡುತ್ತೇನೆ ಎಂದು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಟ ಡಾ| ಶಿವರಾಜ್ ಕುಮಾರ್ ಹೇಳಿದರು.
ಆದಿಸ್ಥಳಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಶಿವರಾಜ್ ಕುಮಾರ್ ಅವರು ಅಜ್ಜನ ಕಟ್ಟೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾಧ್ಯಮದ ಜತೆಗೆ ಮಾತನಾಡಿ, ಕರಾವಳಿಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದೇ ಒಂದು ಖುಷಿಯ ಸಂಗತಿ. ಶೃಂಗೇರಿ ಮಠ, ಶ್ರೀ ಕೃಷ್ಣ ಮಠ, ಕುದ್ರೋಳಿ ಗೋಕರ್ಣನಾಥೇಶ್ವರ, ವನದೇವತೆ, ಕೊರಗಜ್ಜನ ಕ್ಷೇತ್ರಕ್ಕೆ ಸಮಯ ಸಿಕ್ಕಾಗಲೆಲ್ಲ ಬರುತ್ತಿದ್ದೇನೆ. ಇಲ್ಲಿಗೆಲ್ಲ ಭೇಟಿ ಕೊಟ್ಟಾಗ ನೆಮ್ಮದಿ ಸಿಗುತ್ತದೆ. ನಂಬಿಕೆಯೂ ಬಲವಾಗಿರುವುದರಿಂದ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ನ.15ರ ಆಸುಪಾಸಿನಲ್ಲಿ ಅರ್ಜುನ್ ಜನ್ಯ ನಿರ್ದೇಶಿಸಿದ ರಿಯಲ್ ಸ್ಟಾರ್ ಉಪೇಂದ್ರ ರಾಜ್ ಬಿ ಶೆಟ್ಟಿ ಸಹಿತ ತಾನು ನಟಿಸಿದ ಫಾರ್ಟಿಫೈವ್ ಚಿತ್ರ ತೆರೆ ಕಾಣಲಿದೆ. ಇನ್ನೊಂದು ಚಿತ್ರದ ಮಾತುಕತೆ ನಡೆಯುತ್ತಿದ್ದು ಶೀಘ್ರವೇ ಪ್ರಾಜೆಕ್ಟ್ ಆರಂಭವಾಗಲಿದೆ ಎಂದು ಹೇಳಿದ್ದಾರೆ.