ನವದೆಹಲಿ, ಅಕ್ಟೋಬರ್ 02: ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದಿವೆ. ‘ಸರ್ ಕ್ರೀಕ್’ ಪ್ರದೇಶದ ಭಾರತ-ಪಾಕಿಸ್ತಾನ(Pakistan) ಗಡಿ ವಿವಾದ ಸಂಪೂರ್ಣವಾಗಿ ಬಗೆಹರಿದಿಲ್ಲ. ಭಾರತವು ರಾಜತಾಂತ್ರಿಕ ಮಾತುಕತೆಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಪದೇ ಪದೇ ಪ್ರಯತ್ನಿಸಿದೆ. ಆದರೆ ಪಾಕಿಸ್ತಾನದ ಉದ್ದೇಶಗಳು ಸ್ಪಷ್ಟವಾಗಿಲ್ಲ. ಏತನ್ಮಧ್ಯೆ ಪಾಕಿಸ್ತಾನ ಸೇನೆಯು ಇತ್ತೀಚೆಗಷ್ಟೇ ಸರ್ ಕ್ರೀಕ್ ಪಕ್ಕದ ಪ್ರದೇಶಗಳಲ್ಲಿ ತನ್ನ ಮಿಲಿಟರಿ ಮೂಲಸೌಕರ್ಯವನ್ನು ವಿಸ್ತರಿಸಿದೆ. ಇದಕ್ಕೆ ಭಾರತ ಕೆರಳಿದೆ.
ವಿಜಯದಶಮಿಯಂದು ರಾಜನಾಥ್ ಸಿಂಗ್ ಭುಜ್ ವಾಯುನೆಲೆಯಿಂದ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. ‘‘ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನ ಯಾವುದೇ ದುಸ್ಸಾಹಸ ಮಾಡಲು ಧೈರ್ಯ ಮಾಡಿದರೆ, ಇತಿಹಾಸ ಮತ್ತು ಭೌಗೋಳಿಕತೆ ಎರಡನ್ನೂ ಬದಲಾಯಿಸುವ ನಿರ್ಣಾಯಕ ಪ್ರತಿಕ್ರಿಯೆಯನ್ನು ಭಾರತದಿಂದ ಪಡೆಯುವಲ್ಲಿ ಸಂಶಯವಿಲ್ಲ’’ ಎಂದು ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ಇತ್ತೀಚಿನ ಕ್ರಮಗಳು ಈ ಪ್ರದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುವ ಪ್ರಯತ್ನವನ್ನು ಸೂಚಿಸುತ್ತಿರುವುದರಿಂದ ಅದರ ಉದ್ದೇಶಗಳ ಬಗ್ಗೆ ಅನುಮಾನ ಮೂಡುವುದು ಸಹಜ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.





