ಪಾಕ್ ಬೇಹುಗಾರಿಕೆ; ಜ್ಯೋತಿ ಮಲ್ಲೋತ್ರಗೆ ಕಾಸರಗೋಡು ನಂಟು?

Share with

ಕಾಸರಗೋಡು: ಭಾರತದ ಶತ್ರು ದೇಶವಾದ
ಪಾಕಿಸ್ಥಾನದ ಪರವಾಗಿ ಬೇಹುಗಾರಿಕೆ ಆರೋಪದಲ್ಲಿ ಬಂಧಿತಳಾಗಿರುವ ಹರ್ಯಾಣ ಮೂಲದ ಯೂಟ್ಯೂಬರ್‌ ಜ್ಯೋತಿ ಮಲ್ಲೋತ್ರ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆಯ ಉದ್ಘಾಟನೆ ಸಂದರ್ಭಕಾಸರಗೋಡಿಗೆ ಬಂದಿದ್ದಳು ಎಂಬ ಮಾಹಿತಿ ತಿಳಿದುಬಂದಿದೆ.

2023ರಲ್ಲಿ ಜ್ಯೋತಿ ಮಲ್ಲೋತ್ರ ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡಿದ್ದು, ಆ ಬಳಿಕ ಮೂರು ಬಾರಿ ಬಂದುಹೋಗಿದ್ದಳು ಎಂಬುದನ್ನು ತನಿಖೆ ನಡೆಸುತ್ತಿರುವ ಹರ್ಯಾಣ ಪೊಲೀಸರು ಕಂಡುಕೊಂಡಿದ್ದಾರೆ.

ಕೇರಳ ಭೇಟಿಯ ವೀಡಿಯೋಗಳನ್ನು ಆಕೆ ತನ್ನ ಯೂ ಟ್ಯೂಬ್ ಚಾನೆಲ್‌ನಲ್ಲೂ ಹಂಚಿಕೊಂಡಿದ್ದಳು. 2023 ಆಗಸ್ಟ್‌ನಲ್ಲಿ ಜ್ಯೋತಿ ತಿರುವನಂತಪುರಕ್ಕೆ ಪ್ರಥಮ ಬಾರಿಗೆ ಬಂದಿದ್ದಳು. ಕೇರಳಕ್ಕೆ ಮಂಜೂರಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ಆಕೆ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬಯಿಯಿಂದ ಕಾಸರಗೋಡಿಗೆ ಆಗಮಿಸಿ ವಂದೇ ಭಾರತ್ ರೈಲು ಸೇವೆಯ ಉದ್ಘಾಟನೆ ಸಮಾರಂಭದಲ್ಲೂ ಭಾಗವಹಿಸಿದ್ದಳು; ಅನಂತರ ವಂದೇ ಭಾರತ್ ರೈಲಿನಲ್ಲಿ ತಿರುವನಂತಪುರಕ್ಕೆ ತೆರಳಿದ್ದಳೆನ್ನಲಾಗಿದೆ. ಮರುದಿನ ತಿರುವನಂತಪುರದಿಂದ ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಮುಂಬಯಿಗೆ ಮರಳಿದ್ದಳೆಂದು ಹೇಳಲಾಗುತ್ತಿದೆ. ಆ ಬಳಿಕ ಆಕೆ ಕಣ್ಣೂರು ಮತ್ತು ಕೊಚ್ಚಿಗೂ ಭೇಟಿ ನೀಡಿದ್ದಳು. ಆದರೆ ಅದರ ವೀಡಿಯೋ / ಚಿತ್ರಗಳನ್ನು ಆಕೆ ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಅದು ಪೊಲೀಸರ ಸಂಶಯಕ್ಕೆ ಎಡೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪಾಕಿಸ್ಥಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಜ್ಯೋತಿ ಸಹಿತ 12 ಮಂದಿಯನ್ನು ಪೊಲೀಸರು ಈಗಾಗಾಲೇ ಬಂಧಿಸಿದ್ದಾರೆ. ಇವರೆಲ್ಲ ಉತ್ತರ ಭಾರತದಲ್ಲಿ ಕಾರ್ಯವೆಸಗುತ್ತಿರುವ ಪಾಕಿಸ್ಥಾನಿ ಗುಪ್ತಚರ ಏಜೆನ್ಸಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದವರು. ಅವರಲ್ಲಿ 6 ಮಂದಿ ಪಂಜಾಬ್ ನಿವಾಸಿಗಳು, ನಾಲ್ವರು ಹರ್ಯಾಣದವರಾಗಿದ್ದಾರೆ. ಜ್ಯೋತಿ ಮಲ್ಲೋತ್ರಳನ್ನು ಮೇ 16ರಂದು ಹರ್ಯಾಣ ಪೊಲೀಸರು ಹಿಸಾರ್‌ನಿಂದ ಬಂಧಿಸಿದ್ದರು.


Share with

Leave a Reply

Your email address will not be published. Required fields are marked *