ಚೆನ್ನೈ: ವಿವಾದಾತ್ಮಕ ಹೇಳಿಕೆಯಿಂದಲೇ ಹೆಸರುವಾಸಿಯಾಗಿರುವ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಈಗ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಭಾಷಾ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡಿರುವ ಹಣಕಾಸು ನೆರವನ್ನು ಪ್ರಶ್ನಿಸುತ್ತಾ ಸ್ಟಾಲಿನ್ ಸಂಸ್ಕೃತವನ್ನು ಸತ್ತ ಭಾಷೆ ಎಂದು ಕರೆದಿದ್ದಾರೆ. ಇದಲ್ಲದೆ, ಮೋದಿ ಸರ್ಕಾರ ತಮಿಳು ಭಾಷೆಯನ್ನು ನಿರ್ಲಕ್ಷಿಸುತ್ತಿದೆ ಆರೋಪಿಸಿದ್ದಾರೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸಂಸ್ಕೃತವನ್ನು ಸತ್ತ ಭಾಷೆ ಎಂದು ಕರೆದು ರಾಜಕೀಯ ಬಿರುಗಾಳಿ ಎಬ್ಬಿಸಿದರು. ಸಂಸ್ಕೃತವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ತಮಿಳನ್ನು ಬದಿಗಿಟ್ಟಿದೆ ಎಂದು ಅವರು ಹೇಳಿದರು. “ನೀವು ತಮಿಳು ಕಲಿಯಲು ಉತ್ಸುಕರಾಗಿದ್ದರೆ, ನೀವು ಮಕ್ಕಳಿಗೆ ಹಿಂದಿ ಮತ್ತು ಸಂಸ್ಕೃತವನ್ನು ಏಕೆ ಕಲಿಸುತ್ತಿದ್ದೀರಿ?” ಎಂದು ಪ್ರಧಾನಿ ಮೋದಿಯವರನ್ನು ತೀಕ್ಷ್ಮವಾಗಿ ಪ್ರಶ್ನಿಸಿದ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ತಮಿಳು ಭಾಷೆ ಅಭಿವೃದ್ಧಿಗೆ ಕೇವಲ 150 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಆದರೆ ಸತ್ತ ಸಂಸ್ಕೃತ ಭಾಷೆಗೆ 2,400 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂದು ಆರೋಪಿಸಿದ್ದಾರೆ.
ಸ್ಟಾಲಿನ್ ಹೇಳಿಕೆಗೆ ಬಿಜೆಪಿ ತಿರುಗೇಟು:
ಉದಯನಿಧಿ ಸ್ಟಾಲಿನ್ ಹೇಳಿಕೆ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಕಿಡಿಕಾರಿದ್ದು ಯಾವುದೇ ಭಾಷೆಯನ್ನು ಅಗೌರವದಿಂದ ನೋಡುವ ಅಧಿಕಾರ ಯಾರಿಗೂ ಇಲ್ಲ, ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಸ್ಥಾನ ಮಾನ ಇರುತ್ತದೆ ಅದೂ ಅಲ್ಲದೆ ದೇಶದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ಇಂದಿಗೂ ಸಂಸ್ಕೃತದಲ್ಲೇ ಶ್ಲೋಕ ಹಾಗೂ ಪ್ರಾರ್ಥನೆಗಳನ್ನು ಹೇಳಲಾಗುತ್ತಿದೆ ಸಂಸ್ಕೃತ ಭಾಷೆಗೆ ಸನಾತನ ಧರ್ಮದಲ್ಲಿ ಮಹತ್ವದ ಸ್ಥಾನ ಇದೆ ಅಲ್ಲದೆ ಒಂದು ಭಾಷೆಯನ್ನು ಹೊಗಳುವ ಭರದಲ್ಲಿ ಇನ್ನೊಂದು ಭಾಷೆಯನ್ನು ತೆಗಳ ಬಾರದು ಎಂದು ತಿರುಗೇಟು ನೀಡಿದರು.
ಸಂಸ್ಕೃತ ಭಾಷೆಗೆ ಅವಮಾನಿಸಿದ ಸ್ಟಾಲಿನ್ ವಿರುದ್ಧ ಬಿಜೆಪಿ ಸೇರಿದಂತೆ ಹಲವರು ಆಕ್ರೋಶ ಹೊರ ಹಾಕಿದ್ದಾರೆ.




