ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸರ್ಕಾರದ ಪಾಲುದಾರರು

Share with

ಉಡುಪಿ: ಗ್ಯಾರಂಟಿ ಯೋಜನೆಯ ಸವಲತ್ತು ಪಡೆಯುವ ಪ್ರತಿಯೊಬ್ಬ ನಾಗರೀಕರೂ ಕೂಡ ಸರ್ಕಾರದ ಪಾಲುದಾರು ಎಂದು ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಆಯೋಜಿಸಿದ್ದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಗ್ಯಾರಂಟಿ ಯೋಜನೆಗಳ ಪೂರೈಸಲು ಮಾಸಿಕ ₹50 ಲಕ್ಷ ಹಣ ಕರ್ಚಾಗುತ್ತಿದೆ. ಇಲ್ಲಿ ವಾರ್ಷಿಕ ₹6 ಕೋಟಿ ಹಣ ವ್ಯಯಿಸಬೇಕು. ಆದ್ದರಿಂದ ದೇಶದಲ್ಲಿ ಇಂತಹ ಯೋಜನೆ ಎಲ್ಲಿಯೂ ಇಲ್ಲ ಎಂದರು.
ರಾಜ್ಯದಲ್ಲಿ ₹58 ಸಾವಿರ ಕೋಟಿ ಹಣದ ಹೊರೆ ಸರ್ಕಾರಕ್ಕೆ ಆಗುತ್ತಿದೆ. ಆದರೂ, ಈ ಬಗ್ಗೆ ಯಾವುದೇ, ಒಳ ಒಪ್ಪಂದಕ್ಕೆ ಸರ್ಕಾರ ಸಿದ್ದವಿಲ್ಲ. ಜನ ಸಾಮಾನ್ಯರ ತೆರಿಗೆ ಹಣವನ್ನು ಪುನಃ ಜನರಿಗೆ ತಲುಪಿಸಲಾಗುತ್ತಿದೆ ಎನ್ನುವ ಸಂತಸ ಸರ್ಕಾರಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು, ತಮ್ಮ ಬದುಕಿನುದ್ದಕ್ಕೂ ಸಹ ಬಡವರು, ದಲಿತರು, ಶೋಷಿತ ವರ್ಗದವರ ಪರವಾಗಿಯೇ ಚಿಂತಿಸುತ್ತಿದ್ದರು. ಅಂದು, ಬಂಗಾರಪ್ಪ ಅವರು ಜನ ಸಾಮಾನ್ಯರಿಗೆ ನೀಡಿದ ಸೇವೆ, ಇಂದಿಗೂ ಜೀವಂತವಾಗಿವೆ ಎಂದರು.
ಬಂಗಾರಪ್ಪ ಅವರ, ಆರಾಧನ, ಗ್ರಾಮೀಣ ಕೃಪಾಂಕ, ಆಶ್ರಯ ಮತ್ತು ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ಅನೇಕ ಯೋಜನೆಗಳನ್ನು ಬಡವರಿಗೆ ಬದುಕಲು ನೆಲೆ ಕಲ್ಪಿಸಿಕೊಟ್ಟಿವೆ ಎಂದರು.
ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ದೇಶದಲ್ಲಿ ಬಿಜೆಪಿ ಆಡಳಿತದಿಂದ ಜನ ಸಾಮಾನ್ಯರು ಬದುಕು ನಡೇಸುವುದೇ ಶೋಚನೀಯ ಸ್ಥಿತಿ ತಲುಪಿದೆ ಎಂದರು.
ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಮಲತಾಯಿ ಧೋರಣೆ ತೋರಿದ್ದಾರೆ. ಅಧಿಕಾರದ ಗದ್ದಿಗೆ ಏರಿ ೧೫ ವರ್ಷ ಕಳೆದವು.ಆದರೆ, ಕ್ಷೇತ್ರ ಮಾತ್ರ ಕತ್ತಲಲ್ಲಿ ಮುಳುಗಿದೆ ಎಂದು ದೂರಿದರು.
ನಟ ಶಿವರಾಜಕುಮಾರ್ ಮಾತನಾಡಿ, ಚಿಕ್ಕ ವಯಸ್ಸಿನಿಂದ ಪತ್ನಿ ಗೀತಾ ಅವರು ಬಂಗಾರಪ್ಪ ಅವರ ರಾಜಕೀಯ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿ ಬೆಳೆದಿದ್ದಾರೆ. ಬಂಗಾರಪ್ಪ ಅವರು, ಎಲ್ಲಾ ಧರ್ಮ, ಸಮುದಾಯಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅದೇ ಗುಣ ಗೀತಾ ಅವರಿಗೆ ಬಂದಿದೆ. ಜಿಲ್ಲೆಯಲ್ಲಿ ಬಂಗಾರಪ್ಪ ಅವರ ಋಣ ತೀರಿಸಲು ಒಂದು ಅವಕಾಶ ಕಲ್ಪಿಸಿಕೊಡಿ ಎಂದರು.

ಪ್ರಮುಖರಾದ ರಾಜು ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ, ಅರವಿಂದ ಪೂಜಾರಿ, ಹರೀಶ್ ಕೊಡಪಾಡಿ, ಚಂದ್ರ ಶೇಖರ ಪೂಜಾರಿ, ಮಂಜುಳ ದೇವಾಡಿಗ ಸೇರಿ ಗಣ್ಯರು ಇದ್ದರು.


Share with

Leave a Reply

Your email address will not be published. Required fields are marked *