
ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿಯ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆ
ಬದಿಯಡ್ಕ: ನೀರ್ಚಾಲು ಕನ್ನೆಪ್ಪಾಡಿ ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿಯ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ದೈವಗಳ ಕೋಲದ ಸಾಂಸ್ಕೃತಿಕ, ಸಭಾಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು. ಶ್ರೀಮದೆಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು.ಅನಾದಿಕಾಲದಿಂದಲೂ ಮೊಗೇರ ಜನಾಂಗ ತುಳುನಾಡ ದೈವರಾಧನೆಯ ಅಂತಃಸತ್ವವನ್ನು ಕಾಯ್ದುಕೊಂಡು ಬಂದವರು. ಒಂದೊಮ್ಮೆ ಕಾಲಂತರದಲ್ಲಿ ಕೈತಪ್ಪಿ ಹೋಗಿದ್ದ ಕೊಡ್ಯಮ್ಮೆ ದಂಡಿನ ಮೊಗೇರ ಪರಂಪರೆಯವರು ಅದೇ ಹಿಂದಿನ ಸಂಪ್ರದಾಯಿಕ ಆಚರಣೆಯನ್ನು ಕಾಯ್ದುಕೊಳ್ಳಲು ಅಂತಲ ಮೊಗೇರ ಚಾವಡಿ ಪುನರ್ ಪ್ರತಿಷ್ಠಾಪಿಸಿರುವುದು ಭವಿಷ್ಯಕ್ಕೆ ಉದಾತ್ತ ಕೊಡುಗೆಯಾಗಿದೆ ಎಂದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಐ.ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕೊಡ್ಯಮ್ಮೆ ಅರಮನೆಯ ಶ್ರೀ ಕೃಷ್ಣರಾಜ ಬಲ್ಲಾಳರು ಉಪಸ್ಥಿತರಿದ್ದರು. ಉದ್ಯಮಿ ಬಿ.ವಸಂತ ಪೈ ಬದಿಯಡ್ಕ, ಮಲಬಾರು ದೇವಸ್ವಂಬೋರ್ಡು ಸದಸ್ಯ ಎಂ.ಶಂಕರ ರೈ ಮಾಸ್ತರ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಪೆರಡಾಲ ಸೇವಾಸಹಕಾರಿ ಬೇಂಕ್ ಅಧ್ಯಕ್ಷ ಜಯದೇವ ಖಂಡಿಗೆ, ಅಗಲ್ಪಾಡಿ ಶಾಲಾ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ, ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಡಿ.ದಾಮೋದರ, ನೀರ್ಚಾಲು ಮಹಾಜನ ಶಾಲಾ ಮುಖ್ಯೋಪಾಧ್ಯಾಯ ಶಿವಪ್ರಕಾಶ ಎಂ.ಕೆ. ಶುಭಕೋರಿ ಮಾತನಾಡಿದರು. ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿಯ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಕೆ.ಕೆ.ಸ್ವಾಮಿಕೃಪಾ ಸ್ವಾಗತಿಸಿ, ಉಪಾಧ್ಯಕ್ಷ ಎಸ್.ನಾರಾಯಣ ವಂದಿಸಿದರು. ಸುಂದರ ಕಟ್ನಡ್ಕ ಕಾರ್ಯಕ್ರಮ ನಿರೂಪಣೆಗೈದರು.





