ಮಂಜೇಶ್ವರ ರಾಗಂ ಜಂಕ್ಷನಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಏಳನೇ ದಿನಕ್ಕೆ: ಒಕ್ಕೊರಳಿನ ಬೇಡಿಕೆಗೆ ಸ್ಪಂಧಿಸದಿದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Share with

ಮಂಜೇಶ್ವರ: ರಾಗಂ ಜಂಕ್ಷನಿನಲ್ಲಿ ರಾ.ಹೆದ್ದಾರಿ ದಾಟಲು ಸುರಕ್ಷಿತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ 8 ನೇ ದಿನಕ್ಕೆ ಕಾಲಿಟ್ಟಿದೆ. ಮಾಡು ಇಲ್ಲವೇ ಮಡಿ ಎಂಬ ಧ್ಯೇಯದಲ್ಲಿ ಸ್ಥಳೀಯರು ನಡೆಸುತ್ತಿರುವ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಮಂಜೇಶ್ವರ ರಾಗಂ ಜಂಕ್ಷನಿನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ

ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಭಿತ್ತಿ ಪತ್ರ ಎಲ್ಲೆಡೆ ರಾರಾಜಿಸುತ್ತಿರುವುದು ಹೆದ್ದಾರಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸಿದೆ. ಹೆದ್ದಾರಿ ದಾಟಲು ಯಾವುದಾದರೂ ಪರ್ಯಾಯಾ ವ್ಯವಸ್ಥೆ ಲಭಿಸಬಹುದೆಂದು ಜಾತಕ ಪಕ್ಷಿಯಂತೆ ಕಾದು ಕುಳಿತ ಇಲ್ಲಿಯ ಮುಗ್ಧ ಜನತೆಯನ್ನು ವಂಚಿಸಿದ ಗುತ್ತಿಗೆದಾರರ ವಿರುದ್ಧ ಎಲ್ಲಾ ಕಡೆಯಿಂದಲೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಮಾ.5ರ ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಬೆಂಬಲವನ್ನು ವ್ಯಕ್ತಪಡಿಸುವುದರ ಜೊತೆಯಾಗಿ ರಾಗಂ ಜಂಕ್ಷನಿನ ನಾಗರೀಕರಿಗೆ ನ್ಯಾಯ ಸಿಗುವ ತನಕ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

ಸರಕಾರಿ ಆಸ್ಪತ್ರೆ, ಕಾಲೇಜು, ಸ್ಥಳೀಯಾಡಳಿತ ಸಂಸ್ಥೆ, ರೈಲ್ವೇ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಸಂರಕ್ಷಿಸುವ ರಾಗಂ ಜಂಕ್ಷನಿನಲ್ಲಿ ರಾ.ಹೆದ್ದಾರಿ ಷಟ್ಪಥ ರಸ್ತೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದರೂ ಮುಗ್ದ ಜನತೆಯನ್ನು ವಂಚಿಸಿರುವ ಯು ಎಲ್ ಸಿ ಸಿ ಗುತ್ತಿಗೆ ಕಂಪನಿ ಅಧಿಕಾರಿಗಳ ವಿರುದ್ಧ ನ್ಯಾಯಯುತ ಹೋರಾಟಕ್ಕಾಗಿ ಜಾತಿ ಮತ ಭೇಧ ಮರೆತು ಇಡೀ ಊರೇ ಈಗ ಒಂದಾಗಿರುವುದು ಗುತ್ತಿಗೆ ಕಂಪನಿಗೂ ತಲೆ ನೋವಾಗಿ ಪರಿಣಮಿಸಿದೆ.

ಮಾ.5ರಂದು ನಡೆದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಂಜೇಶ್ವರದ ಜನಪ್ರಿಯ ಶಾಸಕ ಎಕೆಎಂ ಅಶ್ರಫ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ತಿರುವನಂತಪುರದಲ್ಲಿರುವ ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮಂಜೇಶ್ವರದಲ್ಲಿ ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಅಧಿಕಾರಿಗಳು ಸ್ಪಂದಿಸದಿದ್ದರೆ ನಾಡಿನ ಜನತೆಯೊಂದಿಗೆ ಸೇರಿ ಪ್ರತಿಭಟನೆಗೆ ಮುಂಚೂಣಿಯಲ್ಲಿ ನಿಲ್ಲಲಿರುವುದಾಗಿ ವಾಗ್ದಾನ ನೀಡಿದರು.

ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂ. ಸದಸ್ಯ ಗೋಲ್ಡನ್ ರಹ್ಮಾನ್ ಸೇರಿದಂತೆ ಜನಪ್ರತಿನಿಧಿಗಳು, ರಾಜಕೀಯ ನೇತಾರರರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.


Share with

Leave a Reply

Your email address will not be published. Required fields are marked *