ಉಪ್ಪಳ: ಉಪ್ಪಳಕ್ಕೆ ಸಂಗಮಿಸುವ ಕೊಡಂಗೆ ಹೊಳೆ ಬತ್ತಿ ಬರಡಾಗಿ ಹೋಗಿದ್ದು, ಇದರಿಂದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಗಳಿಗೆ ವಿತರಿಸಲಾಗುತ್ತಿರುವ ಕುಡಿನೀರು ಯೋಜನೆಯ ಬಾವಿಯಲ್ಲಿ ನೀರಿನ ಪ್ರಮಾಣದಲ್ಲಿ ಭಾರೀ ಕುಸಿತ ಉಂಟಾಗಿದ್ದು, ಇದರಿಂದ ಕುಡಿನೀರು ವಿತರಣೆ ೫ರಿಂದ ೭ ದಿನಕ್ಕೊಮ್ಮೆ ವಿತರಣೆಗೊಳ್ಳುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಳೆಗಾಲ ವಿಳಂಬಗೊAಡರೆ ಮುಂದೆ ಕುಡಿ ನೀರಿಗಾಗಿ ಪರದಾಡುವಂತ ಸ್ಥಿತಿ ಉಂಟಾಗಬಹುದೆAದು ಸಾರ್ವಜನಿಕರು ಅಭಿಪ್ರಾಯಪಟ್ಟಿದೆ. ಕೊಡಂಗೆ ಹೊಳೆಯಲ್ಲಿ ನಿರ್ಮಿಸಲಾದ ಕುಡಿ ನೀರು ಯೋಜನೆಯ ಬೃಹತ್ ಬಾವಿಯಿಂದ ಬೇಕೂರು ಸಬ್ ಸ್ಟೇಶನ್ ಬಳಿಯಿರುವ ಟ್ಯಾಂಕ್ಗೆ ನೀರು ಸರಬರಾಜು ಮಾಡಿ ಅಲ್ಲಿಂದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಸಾವಿರಾರು ಮಂದಿಗೆ ನೀರು ವಿತರಣೆಗೊಳ್ಳುತ್ತಿದೆ. ಎರಡು ದಿನಕ್ಕೊಮ್ಮೆ ವಿತರಣೆಗೊಳ್ಳುತಿದ್ದ ನೀರು ಇದೀಗ ಹಲವಾರು ದಿನಕ್ಕೊಮ್ಮೆ ವಿತರಿಸಲಾಗುತ್ತಿದ್ದು, ಇದರಿಂದ ನಳ್ಳಿ ನೀರನ್ನೇ ಆಶ್ರಯಿಸುವ ಕುಟುಂಬಗಳು ಸಂಕಷ್ಟಗೊಂಡಿರುವುದಾಗಿ ಊರವರು ತಿಳಿಸಿದ್ದಾರೆ. ಹೊಳೆಯಲ್ಲಿ ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ನೀರು ಬತ್ತಿ ಹೋಗಿದ್ದು, ಈ ವರ್ಷ ಮಾರ್ಚ್ ಕೊನೆಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿ ಹೊಳೆ ಮೈದಾನದಂತಾಗಿದೆ. ಇದರಿಂದ ಬಾವಿಯಲ್ಲಿ ನೀರು ತೀರಾ ಕಡಿಮೆಯಾಗಿದುದರಿಂದ ದಿನದಲ್ಲಿ ಒಂದು ಗಂಟೆಗೊಮ್ಮೆ ಕಾರ್ಮಿಕರು ರಾತ್ರಿ ಹಗಲು ಪಂಪ್ ಚಾಲನೆ ಮಾಡಿ ನೀರನ್ನು ಟ್ಯಾಂಕ್ ನಲ್ಲಿ ಸಂಗ್ರಹಿಸಿ ಹಲವು ಸೆಕ್ಷನ್ ಗಳಾಗಿ ವಿಂಗಡಿಸಿ ಎಲ್ಲಾ ಕಡೇ ವಿತರಿಸಲಾಗುತ್ತಿದ್ದು, ಇದರಿಂದ ನೀರು ವಿತರಣೆಯ ದಿನ ಹೆಚ್ಚಾಗಲು ಕಾರಣವೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ಪೈಪ್ಲೈನ್ ಸಂಪರ್ಕ ಮಿತಿ ಮೀರಿದ್ದು ಇದರಿಂದ ನೀರಿನ ವೇಗತೆ ಕಡಿಮೆಗೊಳ್ಳುತ್ತಿದ್ದು, ಎಲ್ಲಾ ಕಡೆ ಸರಿಯಾಗಿ ನೀರು ವಿತರಣೆಗೊಳ್ಳುತ್ತಿಲ್ಲವೆಂದು ನಾಗರಿಕರು ಆರೋಪಿಸಿದ್ದಾರೆ. ಅಲ್ಲದೆ ವಿವಿಧ ಕಡೆಗಳಲ್ಲಿ ಕುಡಿ ನೀರನ್ನು ತೋಟ ಹಾಗೂ ಇತರ ಕೃಷಿಗಳಿಗೆ ಬಳಸಿ ವ್ಯರ್ತ ಮಾಡುತ್ತಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆನ್ನಲಾಗಿದೆ. ಇನ್ನೊಂದು ಟ್ಯಾಂಕ್ ಹಾಗೂ ಬಾವಿ ನಿರ್ಮಿಸಿದರೆ ಕುಡಿ ನೀರಿನ ಸಮಸ್ಯೆಗೆ ಪರಿಹಾರ ಕಾಣಬಹುದೆಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದೀಗ ಪಂಚಾಯತ್ನ ಕುಡಿ ನೀರು ವಿತರಣೆ ಅತ್ಯಗತ್ಯವಾಗಿದ್ದು, ಕೂಡಲೇ ವಾಹನದಲ್ಲಿ ನೀರು ವಿತರಣೆ ಕ್ರಮಕ್ಕೆ ಅಧಿಕಾರಿಗಳು ಮುಂದಾಗಬೇಕೆಂದು ಊರವರು ಒತ್ತಾಯಿಸಿದ್ದಾರೆ.