ವಿಟ್ಲ: ಮಾಂಸದ ಉಳಿದ ತ್ಯಾಜ್ಯವನ್ನು ರಸ್ತೆಯ ಬದಿಯಲ್ಲಿ ಎಸೆದು ಹೋಗಿರುವ ಘಟನೆ ವಿಟ್ಲ ಸಮೀಪದ ಕೆಲಿಂಜ ಬಸ್ ನಿಲ್ದಾಣದ ಬಳಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಲ್ಲಡ್ಕ–ವಿಟ್ಲ ನಡುವಣ ಕೆಲಿಂಜ ಎಂಬಲ್ಲಿ ಬಸ್ ನಿಲ್ದಾಣದ ಬಳಿ ರಸ್ತೆಯ ಬದಿಯಲ್ಲಿ ಪ್ರಾಣಿಯ ದೇಹದ ಬೇರೆ ಬೇರೆ ಭಾಗಗಳನ್ನು ಎಸೆದು ಹೋದ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತ್ ಸದಸ್ಯರಿಗೆ ಮಾಹಿತಿ ನೀಡಿದ್ದು, ಅವರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ವಸ್ತುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಮೇಲ್ನೋಟಕ್ಕೆ ಇವುಗಳು ದನಗಳ ಕೈ, ಕಾಲು, ಚರ್ಮ, ಹಲ್ಲು, ತಲೆಯ ಭಾಗದಂತೆ ಕಂಡು ಬರುತ್ತಿವೆ. ಈ ಸ್ಥಳದಲ್ಲಿ ಈ ಹಿಂದೆ ಹಲವು ಬಾರಿ ಮಾಂಸ ತ್ಯಾಜ್ಯ ಕಂಡು ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕಸಾಯಿ ಖಾನೆ ಈ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.