ಮೂಡುಬಿದಿರೆ: ಟಿಪ್ಪರ್ಗೆ ಬೈಕ್ ಢಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ತಾಯಿ ಮತ್ತು ಮಗ ಸಾವನ್ನಪ್ಪಿದ ಘಟನೆ ಪುರಸಭೆ ವ್ಯಾಪ್ತಿಯ ಮಹಾವೀರ ಕಾಲೇಜು ರಸ್ತೆಯ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಸಂಜೆ ಸಂಭವಿಸಿದೆ.

ಮೃತಪಟ್ಟವರನ್ನು ಗಂಟಾಲ್ಕಟ್ಟೆ ನೀರಲ್ಕೆ ನಿವಾಸಿಗಳಾದ ಪ್ರೇಮಾ ಶೆಟ್ಟಿ (68) ಮತ್ತು ಅವರ ಮಗ ಶ್ರೀನಿವಾಸ ಶೆಟ್ಟಿ (30) ಎಂದು ಗುರುತಿಸಲಾಗಿದೆ.
ಮೂಡುಬಿದಿರೆಯಿಂದ ಗಂಟಾಲ್ಕಟ್ಟೆ ಕಡೆಗೆ ಬೈಕ್ನಲ್ಲಿ ಸಾಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿಪ್ಪರ್ಗೆ ಬೈಕ್ ಢಿಕ್ಕಿಯಾಗಿದ್ದು, ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಶ್ರೀನಿವಾಸ ಶೆಟ್ಟಿಯವರು ಕೂಲಿ ಕಾರ್ಮಿಕರಾಗಿದ್ದರು.
ನೀರಲ್ಕೆಯಲ್ಲಿ ತಾಯಿ ಮತ್ತು ಅವಿವಾಹಿತ ಮಗ ಶ್ರೀನಿವಾಸ ವಾಸವಾಗಿದ್ದರು. ಪ್ರೇಮಾ ಅವರ ಕಿರಿಯ ಪುತ್ರ ಕಳೆದ ವರ್ಷ ರಿಕ್ಷಾ ಅವಘಡದಲ್ಲಿ ಮೃತಪಟ್ಟಿದ್ದರು. ಮತ್ತೋರ್ವ ಪುತ್ರ ಗಂಜಿಮಠದ ಬ್ಯಾಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ರಾಯಿಯಲ್ಲಿ ಚಿಕ್ಕಮ್ಮ ನ ಜತೆ ವಾಸವಾಗಿದ್ದಾರೆ.




