ಕುಂಬಳೆ: ಕರ್ನಾಟಕ ಮದ್ಯ ಹಾಗೂ ಸಾರಾಯಿ ತಯಾರಿಸುವ ಹುಳಿರಸ ಸಹಿತ ಇಬ್ಬರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕನ್ಯಪ್ಪಾಡಿಯ ಜಿ.ಕೆ. ಸಂತೋಷ್ (35) ಎಂಬಾತನನ್ನು 50 ಲೀಟರ್ ಸಾರಾಯಿ ಹುಳಿರಸ ಸಹಿತ ಗೋಳಿಯಡ್ಕದಿಂದ ಬದಿಯಡ್ಕ ರೇಂಜ್ ಅಬಕಾರಿ ಇನ್ಸ್ಪೆಕ್ಟರ್ ಜಿಷ್ಣು ಪಿ.ಆರ್. ನೇತೃತ್ವದ ತಂಡ ಬಂಧಿಸಿದೆ. ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಎ.ಕೃಷ್ಣ ಪ್ರಿವೆಂಟಿವ್ ಆಫೀಸರ್ಗಳಾದ ಕೆ. ಸಾಬು, ಮಂಜುನಾಥ ಆಳ್ವ ಸಿವಿಲ್ ಎಕ್ಸೆಸ್ ಆಫೀಸರ್ಗಳಾದ ಪಿ. ಸದಾ ನಂದನ್, ಟಿ. ಧನ್ಯ ಎಂಬಿವರಿದ್ದರು.

ಇನ್ನೊಂದು ಪ್ರಕರಣದಲ್ಲಿ ಬಾಡೂರು ನೈಮುಗೇರು ನಿವಾಸಿ ಸೀತಾರಾಮ ರೈ ಎಂಬಾತನನ್ನು 3.78 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಸಹಿತ ಕುಂಬಳೆ ಅಬಕಾರಿ ರೇಂಜ್ ಇನ್ಸ್ಪೆಕ್ಟರ್ ಕೆ.ವಿ. ಶ್ರಾವಣ್ ಹಾಗೂ ತಂಡ ಬಂಧಿಸಿದೆ. ಸೀತಾರಾಮ ರೈ ನೇತೃತ್ವದಲ್ಲಿ ಕರ್ನಾಟಕ ಮದ್ಯ ಮಾರಾಟಗೈಯ್ಯಲಾಗುತ್ತಿದೆ ಎಂದು ಆರೋಪಿಸಿ ಬಾಡೂರಿನಿಂದ ಮುಖ್ಯಮಂತ್ರಿಗೆ ದೂರು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಹಲವು ದಿನಗಳ ಕಾಲ ನಿಗಾ ಇರಿಸಿ ಈತನನ್ನು ಸೆರೆ ಹಿಡಿಯಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಿರುದ್ಧ ಪ್ರಸ್ತುತ ನಾಲ್ಕು ಕೇಸುಗಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಕೆ. ಪೀತಾಂಭರನ್, ಸಿವಿಲ್ ಎಕ್ಸೆಸ್ ಆಫೀಸರ್ಗಳಾದ ಎಂ.ಎಂ. ಅಖಿಲೇಶ್, ವಿ. ಜಿತಿನ್, ಚಾಲಕ ಪ್ರವೀಣ್ ಕುಮಾರ್ ಎಂಬಿವರಿದ್ದರು.




