ಉಡುಪಿ: ಮೂರು ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

Share with

ಅಂತಿಮ ನಮನ ಸಲ್ಲಿಸಿದ ಜಿಲ್ಲಾ ಸರ್ಜನ್ ಅಶೋಕ್ ಎಚ್, ನಗರ ಪೋಲಿಸ್ ಠಾಣಾಧಿಕಾರಿ ಪುನೀತ್ ಕುಮಾರ್

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 278ನೇ ಶವದ ಅಂತ್ಯಸಂಸ್ಕಾರ

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು. ಇದು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತೃತ್ವದ ತಂಡ ಪೋಲಿಸ್ ಇಲಾಖೆಗೆ ಸಹಕರಿಸಿರುವ 278ನೇ ವಾರಸುದಾರರಿಲ್ಲದ ಅಂತ್ಯಸಂಸ್ಕಾರವಾಗಿದೆ.
ಜಿಲ್ಲಾಸ್ಪತ್ರೆಯ ಜಿಲ್ಲಾಸರ್ಜನ್ ಅಶೋಕ್ ಎಚ್ ಮತ್ತು ನಗರ ಪೋಲಿಸ್ ಠಾಣಾಧಿಕಾರಿ ಪುನೀತ್ ಕುಮಾರ್ ಅನಾಥ ಶವಗಳ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಅಂತಿಮ ನಮನ ಸಮರ್ಪಿಸಿ ಮಾನವೀಯತೆ ಮೆರೆದಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾದ ಶವ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ರೋಗಿಗಳ ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿತ್ತು. ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಕಾಯುವಿಕೆ ಕಾಲಮಿತಿ ಕಳೆದರೂ ಮೃತರ ವಾರಸುದಾರರು ಬಾರದೆ ಇರುವುದರಿಂದ, ಕಾನೂನು ಪ್ರಕ್ರಿಯೆಗಳು ನಡೆಸಿದ ಬಳಿಕ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.
ನಗರ ಠಾಣೆಯ ಎಎಸ್ಐ ತಾರಾನಾಥ್ ಹಾಗೂ ವಿದ್ಯಾ ಕಾನೂನು ಪ್ರಕ್ರಿಯೆ ನಡೆಸಿದರು. ಜಿಲ್ಲಾಸ್ಪತ್ರೆ, ನಗರಸಭೆ ಅಂತ್ಯಸಂಸ್ಕಾರ ಕಾರ್ಯಕ್ಕೆ ಸಹಕಾರ ನೀಡಿತು. ವಿಕಾಸ್ ಶೆಟ್ಟಿ ಒಳಕಾಡು, ಪ್ರದೀಪ್ ಅಛ್ಜರಕಾಡು, ಸೋನಿ , ಫ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸಾಜಿ ಕುಮಾರ್ ನೆರವಾದರು.


Share with

Leave a Reply

Your email address will not be published. Required fields are marked *