ಉಪ್ಪಳ: ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ಲೋಕಾರ್ಪಣೆಗೊಂಡ ಸಂಭ್ರಮವನ್ನು ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷವಾಗೀ ಆಚರಿಸಲಾಯಿತು.


ಬೆಳಿಗ್ಗೆ ಭಕ್ತರಿಂದ ಭಜನೆ, ರಾಮ ತಾರಕ ಮಂತ್ರ ಪಠಿಸಲಾಯಿತು. ಬಳಿಕ ರಾಮ ಲಲ್ಲನ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರವನ್ನು ಪರದೆಯಲ್ಲಿ ತೋರಿಸಲಾಯಿತು. ಮಹಾಪೂಜೆ ಅನ್ನ ಪ್ರಸಾದ, ಲಡ್ಡು, ಹೋಳಿಗೆ ಸಿಹಿತಿಂಡಿ ವಿತರಿಸಲಾಯಿತು. ಸಂಜೆ ತರುಣ ಕಲಾವೃಂದ ಐಲ ಉಪ್ಪಳ ಇದರ ವತಿಯಿಂದ ವಿಶೇಷ ದೀಪಾಲಂಕಾರದೊಂದಿಗೆ ಐಲ ಕ್ಷೇತ್ರ ಪರಿಸರದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.
ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೋಡಿಬೈಲು ನಾರಾಯಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸತ್ಸಂಗ ಸಭೆ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಭೋಧಿನಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕಜಂಪಾಡಿ ಸುಬ್ರಮಣ್ಯ ಭಟ್ ರವರು ರಾಮಾಯಣ ಜೀವನದಲ್ಲಿ ಅನುಸರಣೆ ಮಾಡಲು ಇರುವ ಗ್ರಂಥವೆಂದು, ಪ್ರತಿಯೊಂದು ಪಾತ್ರವೂ ಅನುಸರಣೆಗೆ ಯೋಗ್ಯವಾಗಿದೆ ಎಂದು ತಿಳಿಸಿದರು.
ರಂಗಕರ್ಮಿ ನಾಟಕ ಕಲಾವಿದ ಶ್ರೀ ಕಾಸರಗೋಡು ಚಿನ್ನಾರವರು ಅಯೋಧ್ಯೆಯ ರಾಮಮಂದಿರವನ್ನು ನೋಡಲು ಎಲ್ಲರೂ ಹೋಗಿ ಜೀವನ ಪಾವನ ಮಾಡಿ ಎಂದು ಕರೆ ಇತ್ತರು. ಪತ್ರಕರ್ತರಾದ ಎಂ ನಾ ಚಂಬಲ್ತಿ ಮಾರ್ ರವರು ರಾಮ ಮಂದಿರ ನಿರ್ಮಾಣದ ಹಿಂದಿನ ರಾಮಭಕ್ತರ ನೆನಪನ್ನು ಮಾಡಿದರು. ತರುಣ ಕಲಾವೃಂದದ ಅಧ್ಯಕ್ಷರಾದ ಮೋಹನ್ ದಾಸ್ ಐಲ ಸ್ವಾಗತಿಸಿ, ಕೋಶಾಧಿಕಾರಿ ಚಿನ್ನಾ ಐಲ ಧನ್ಯವಾದ ವಿತ್ತರು. ಕಮಲಾಕ್ಷ ಐಲ ನಿರೂಪಿಸಿದರು. ಬಳಿಕ ಖ್ಯಾತ ಗಾಯಕ ರವೀಂದ್ರ ಪ್ರಭು ಮತ್ತು ಬಳಗದವರಿಂದ ಶ್ರೀರಾಮ, ಹನುಮಂತರ ಭಕ್ತಿಗೀತೆ ಜರಗಿತು.
ಸದ್ದಿಲ್ಲದ ಸುಡುಮದ್ದಿನ ಬೆಳಕಿನ ಪ್ರಭೆಯಲ್ಲಿ ಹಲವಾರು ಭಕ್ತರ ಸಮಕ್ಷಮದಲ್ಲಿ ಉಪಾಹಾರ ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.




