ತಾಲೂಕು ಮಟ್ಟದ ಸಾಹಿತ್ಯ ಸಂಭ್ರಮ ತರಬೇತಿ ಶಿಬಿರದ ಸಮಾರೋಪ ಸಮಾರಂಭ

Share with

“ಸಾಹಿತ್ಯದಿಂದ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಪ್ರತಿಯೊಂದು ಮಗುವು ವಿಶೇಷ ಪ್ರತಿಭೆ ಹೊಂದಿರುತ್ತದೆ. ಸಾಹಿತ್ಯವು ಆ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಅಪಾರ ಅವಕಾಶವನ್ನು ಒದಗಿಸುತ್ತದೆ. ಸಾಹಿತ್ಯದಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆಯ ಸಂಭ್ರಮ ಸಾಕಾರಗೊಳ್ಳುತ್ತದೆ ” ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಬಂಟ್ಟಾಳ ಇದರ ಅಧ್ಯಕ್ಷರಾದ ಶ್ರೀಕಲಾ ಕಾರಂತ್ ರವರು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡುವಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದಿಂದ ನಡೆದ ತಾಲೂಕು ಮಟ್ಟದ 2 ದಿನಗಳ ಸಾಹಿತ್ಯ ಸಂಭ್ರಮ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಾಹಿತ್ಯ ಸಂಭ್ರಮ ತರಬೇತಿ ಶಿಬಿರದ ಸಮಾರೋಪ ಸಮಾರಂಭ.

“ಮಕ್ಕಳು ಕಲಿಕೆಯ ಜತೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜ ಗುರುತಿಸುವ ಪ್ರತಿಭೆಗಳಾಗಿ ಹೊರಹೊಮ್ಮುತ್ತಾರೆ. ಆ ನಿಟ್ಟಿನಲ್ಲಿ ಶಿಬಿರದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ” ಎಂದು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮಪ್ರಸಾದ್ ರೈ ತಿರುವಾಜೆ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಸ್ಕರ್ ಅಡ್ವಾಳರು ಸ್ವರಚಿತ ಕವನ ಹಾಗೂ ಕಥೆ ರಚನೆ, ರಮೇಶ ಬಾಯಾರುರವರು ಭಾಷಣ ಕಲೆ, ತುಳಸಿ ಕೈರಂಗಳ ರವರು ಕಥೆ ರಚನೆ, ಗೋಪಾಲಕೃಷ್ಣ ನೇರಳಕಟ್ಟೆಯವರು ಕವನ ರಚನೆ, ಶ್ರೀಕಲಾ ಕಾರಂತ ಅಳಿಕೆಯವರು ಬಾಲ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಗುತ್ತಿಗೆದಾರರಾದ ಗಣೇಶ ಪ್ರಭು ಮೋಂತಿಮಾರು, ಗೌರವ ಸಲಹೆಗಾರರಾದ ಬಾಲಕೃಷ್ಣ ಕಾರಂತ್ ಎರುಂಬು, ಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲಾ ವಿಟ್ಲ, ಸಾಹಿತಿಗಳಾದ ಭಾಸ್ಕರ್ ಅಡ್ವಾಳ ಹಾಗೂ ರಮೇಶ್ ಬಾಯಾರು, “ಪರಿಷತ್ತಿನ ವಲಯ ಸಂಯೋಜಕರಾದ ರಾಧಾಕೃಷ್ಣ ಮೂಲ್ಯ ಅಮ್ಟೂರು, ಸಾಹಿತಿ ತುಳಸಿ ಕೈರಂಗಳ್ ಉಪಸ್ಥಿತರಿದ್ದರು.

ಶಿಬಿರ ಸಂಯೋಜಕರಾದ ಕಲಾವಿದ ಶ್ರೀ ತಾರಾನಾಥ್ ಕೈರಂಗಳ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಶಿಕ್ಷಕ ವೃಂದದವರು ಸಹಕರಿಸಿದರು.


Share with

Leave a Reply

Your email address will not be published. Required fields are marked *