ವೇದಿಕೆಯಲ್ಲಿ 30 ಮಂದಿಗಷ್ಟೇ ಅವಕಾಶ: ಪಿಡಬ್ಲ್ಯೂಡಿ ಪತ್ರ

ಬೆಂಗಳೂರು: ಆರ್ಸಿಬಿ ತಂಡಕ್ಕೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ದಲ್ಲಿ ಸುರಕ್ಷತಾ ಷರತ್ತು ಹಾಗೂ ಶಿಷ್ಟಾಚಾರ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ.
ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ವಿಧಾನಸೌಧ ಕಟ್ಟಡಗಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಕಚೇರಿಯಿಂದ ಜೂ.4ಕ್ಕೆ ವಿಧಾನ ಸೌಧ ಭದ್ರತಾ ಇನ್ಸ್ಪೆಕ್ಟರ್ಗೆ ಬರೆದ ಪತ್ರದಿಂದ ಈ ವಿಚಾರ ಬಹಿರಂಗವಾಗಿದೆ.
ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ, ಸಚಿವರು, ಶಾಸಕರು, ಗಣ್ಯರು ಭಾಗವಹಿಸಲು ಯೋಗ್ಯವಿರುವ ವೇದಿಕೆಯನ್ನು ಪರಿಶೀಲಿಸಿ ಪ್ರಮಾಣಪತ್ರ ನೀಡುವಂತೆ ವಿಧಾನ ಸೌಧ ಭದ್ರತಾ ಪೊಲೀಸ್ ಇನ್ಸ್ಪೆಕ್ಟರ್ ಜೂ. 4ರಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ಗೆ ಪತ್ರ ಬರೆದಿದ್ದರು.
ಅದಕ್ಕೆ ಅದೇ ದಿನ ವಿವರಣೆ ನೀಡಿದ ಲೋಕೋಪಯೋಗಿ ಇಲಾಖೆ, ವೇದಿಕೆಯು 60/20 ಅಡಿ ವೇದಿಕೆಯ ಅಳತೆ ಇದ್ದು, ವೇದಿಕೆಯ ಮೇಲೆ 25ರಿಂದ 30 ಜನ ಮಾತ್ರ ಅತಿಥಿಗಳು ಆಸೀನರಾಗಿ ವೇದಿಕೆ ಆಯೋಜಕರನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಸಬಹುದೆಂದು ಷರತ್ತಿನ ಮೇಲೆ ವೇದಿಕೆ ಉಪಯೋಗಿಸಲು ದೃಢೀಕರಿ ಸಲಾಗಿದೆ ಎಂದು ಹೇಳಿತ್ತು. ಆದರೆ ಪತ್ರದಲ್ಲಿನ ಷರತ್ತು, ನಿಬಂದನೆಗಳು ಪಾಲನೆಯಾಗಿಲ್ಲ ಎಂದು ತಿಳಿದುಬಂದಿದೆ.




