3700 ಕೋಟಿ ನಷ್ಟ, ಚಿತ್ರರಂಗಕ್ಕೆ ವಿಲನ್, ಜನರಿಗೆ ಹೀರೋ ಯಾರು ಈ ಇಮ್ಮಡಿ ರವಿ?

Share with

ಇಮ್ಮಡಿ ರವಿ (Immadi Ravi), ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲ ಇಡೀ ದೇಶದ ಸಿನಿ ಪ್ರೇಮಿಗಳ ಗಮನ ಈಗ ಈತನ ಮೇಲಿದೆ. ಪೈರಸಿ ಎಂಬುದು ಸಿನಿಮಾಕ್ಕೆ ಕ್ಯಾನ್ಸರ್ ಎನ್ನಲಾಗುತ್ತದೆ. ಈ ಕ್ಯಾನ್ಸರ್ ಹರಡಲು ಕಾರಣವಾದ ವ್ಯಕ್ತಿ ಈ ಇಮ್ಮಡಿ ರವಿ. ಯಾರೋ ಕೆಲವು ಕಂಪ್ಯೂಟರ್ ಸ್ಯಾವಿ ಜನರಿಗೆ ಮಾತ್ರವೆ ದೊರಕುತ್ತಿದ್ದ ಪೈರಸಿ ಸಿನಿಮಾಗಳನ್ನು, ಮನೆ-ಮನೆಗೆ ತಲುಪುವಂತೆ ಮಾಡಿದ (ಕು)ಖ್ಯಾತಿ ಈತನಿಗೆ ಸಲ್ಲುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಕುಖ್ಯಾತ ಪೈರಸಿ ವೆಬ್ಸೈಟ್ ತಮಿಳು ರಾಕರ್ಸ್ ಅನ್ನೇ ಹಿಂದಿಕ್ಕಿ ಸಾವಿರಾರು ಸಿನಿಮಾಗಳು ಉಚಿತವಾಗಿ ಬೆರಳು ತುದಿಗೆ ಸಿಗುವಂತೆ ಮಾಡಿಬಿಟ್ಟಿದ್ದ ಈತ. ಈಗ ಐಬೊಮ್ಮ ರವಿ ಸೈಬರಾಬಾದ್ ಪೊಲೀಸರ ವಶದಲ್ಲಿದ್ದಾನೆ. ಚಿತ್ರರಂಗದವರಂತೂ ಆತನನ್ನು ನೇಣಿಗೇರಿಸಿ ಎಂದು ಬೊಬ್ಬಿರಿಯುತ್ತಿದ್ದಾರೆ. ಆದರೆ ಸಾಮಾನ್ಯ ಜನ ಆತ ‘ಬಡವರ ಬಂಧು’ ಎನ್ನುತ್ತಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಮ್ಮಡಿ ರವಿಯಿಂದ ಚಿತ್ರರಂಗಕ್ಕೆ ಬರೋಬ್ಬರಿ 3700 ಕೋಟಿ ನಷ್ಟವಾಗಿದೆಯಂತೆ. ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ಖ್ಯಾತ ನಿರ್ಮಾಪಕ ಸುರೇಶ್ ಸೇರಿದಂತೆ ಹಲವು ಖುದ್ದಾಗಿ ಸೈಬರಾಬಾದ್ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಏನಾದರೂ ಮಾಡಿ ಆ ಐಬೊಮ್ಮ ವೆಬ್ಸೈಟ್ ಬಂದ್ ಮಾಡಿಸಿ ಎಂದು ಗೋಗರೆದಿದ್ದರು. ಚಿತ್ರರಂಗದ ಜನರಿಗೆ ಬೆಂಬಿಡದ ತಲೆ ನೋವಾಗಿದ್ದ ಐಬೊಮ್ಮ ಸಂಸ್ಥಾಪಕ ರವಿಯನ್ನು ಪೊಲೀಸರು ನವೆಂಬರ್ 15 ರಂದು ಬಂಧಿಸಿದರು. ಇಷ್ಟಕ್ಕೂ ಈ ಇಮ್ಮಡಿ ರವಿ ಯಾರು? ಈತನ ಹಿನ್ನೆಲೆ ಏನು?

ಇಮ್ಮಡಿ ರವಿ ವೈಜಾಗ್ನ ಒಬ್ಬ ಸಾಮಾನ್ಯ ಯುವಕ. ಅವರ ತಂದೆ ಬಿಎಸ್ಎನ್ಎಲ್ನಲ್ಲಿ ಕೆಲಸ ಮಾಡುತ್ತಿದ್ದರು. ರವಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವೀಧರ. ನಂತರ ಎಂಬಿಎ ಸಹ ಓದಿದ್ದಾನೆ. ಕಂಪೆನಿಯೊಂದರಲ್ಲಿ ಕೆಲಸ ಮಾಡುವಾಗ ಇಮ್ಮಡಿ ರವಿ ಯುವತಿಯೊಬ್ಬಾಕೆಯನ್ನು ಪ್ರೀತಿಸಿ ಮದುವೆ ಆದ. ರವಿ ಮದುವೆಯಾದ ಯುವತಿ ಶ್ರೀಮಂತ ಕುಟುಂಬದಾಕೆ, ಆಕೆಯ ಪೋಷಕರು ವಿದೇಶದಲ್ಲಿ ನೆಲೆಸಿದ್ದರು. ರವಿ ಆಗಿನ್ನೂ ವೆಬ್ಸೈಟ್ ಡಿಸೈನ್, ಹೋಸ್ಟಿಂಗ್ ಮಾಡುತ್ತಿದ್ದ. ನೀನು ಹಣ ಮಾಡಿ ಐಶಾರಾಮಿ ಜೀವನಶೈಲಿಯನ್ನು ಹೊಂದಬೇಕು ಎಂದು ರವಿಯ ಪತ್ನಿ, ಪತ್ನಿಯ ಮನೆಯವರು ರವಿಯನ್ನು ಒತ್ತಾಯಿಸುತ್ತಿದ್ದರು. ಆಗ ರವಿಗೆ ಸಿನಿಮಾ ರಂಗದಲ್ಲಿ ಏನಾದರೂ ಮಾಡುವ ಆಸೆಯಿತ್ತು.

ಅಲ್ಲದೆ ರವಿಗೆ ಸಿನಿಮಾ ನೋಡುವ ಹುಚ್ಚಿತ್ತು, ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಹಣ, ಸಮಯ ವ್ಯರ್ಥ ಎನಿಸಿ, ಪೈರಸಿ ಸೈಟ್ಗಳಿಂದ ಸಿನಿಮಾಗಳನ್ನು ಡೌನ್ಲೋಡ್ ಮಾಡಿಕೊಂಡು ನೋಡುತ್ತಿದ್ದ. ಆ ನಂತರ ತಾನೇ ಏಕೆ ಸಿನಿಮಾಗಳನ್ನು ಡೌನ್ಲೋಡ್ ಮಾಡಿ ತನ್ನದೇ ವೆಬ್ಸೈಟ್ನಲ್ಲಿ ಅದನ್ನು ಎಲ್ಲರಿಗೂ ತೋರಿಸಬಾರದು ಎನಿಸಿತು. ಅದರಂತೆ 2018-19ರ ಸಮಯದಲ್ಲಿ ಐಬೊಮ್ಮ (IBomma) ವೆಬ್ಸೈಟ್ ಪ್ರಾರಂಭಿಸಿದ. ಅದೇ ಸಮಯದಲ್ಲಿ ಕೋವಿಡ್ ಬಂದು ಡಿಜಿಟಲ್ ಕಂಟೆಂಟ್ಗೆ ಡಿಮ್ಯಾಂಡ್ ಹೆಚ್ಚಾಯ್ತು. ಹಾಗಾಗಿ ಐಬೊಮ್ಮ ಕೇವಲ ಒಂದೇ ವರ್ಷದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿತು.

ಇದನ್ನೂ ಓದಿ:ಪೊಲೀಸ್ ಆಯುಕ್ತರ ಭೇಟಿಯಾಗಿ ಧನ್ಯವಾದ ಹೇಳಿದ ಚಿರಂಜೀವಿ-ನಾಗಾರ್ಜುನ: ಕಾರಣವೇನು?

ಅದೇ ಸಮಯದಲ್ಲಿ 1ಎಕ್ಸ್ ಬೆಟ್ ಹಾಗೂ ಇನ್ನಿತರೆ ವಿದೇಶಿ ಬೆಟ್ಟಿಂಗ್ ಸೈಟ್ಗಳು ಐಬೊಮ್ಮದ ಇಮ್ಮಡಿ ರವಿಯನ್ನು ಸಂಪರ್ಕಿಸಿ, ವೆಬ್ಸೈಟ್ನಲ್ಲಿ ತಮ್ಮ ಜಾಹೀರಾತು ಪ್ರದರ್ಶಿಸುವಂತೆ ಕೇಳಿಕೊಂಡವು. ಇದಕ್ಕಾಗಿ 2020ರಲ್ಲಿಯೇ ರವಿಗೆ ತಿಂಗಳಿಗೆ ಐದು ಲಕ್ಷ ರೂಪಾಯಿ ಹಣ ನೀಡುತ್ತಿದ್ದವಂತೆ ಈ ಸೈಟ್ಗಳು. ರವಿ, ವಿವಿಧ ಒಟಿಟಿಗಳಿಂದ, ಬೇರೆ ವೆಬ್ಸೈಟ್ಗಳಿಂದ ಸಿನಿಮಾಗಳನ್ನು ಡೌನ್ಲೋಡ್ ಮಾಡಿ ಐಬೊಮ್ಮ ವೆಬ್ಸೈಟ್ಗೆ ಅಪ್ಲೋಡ್ ಮಾಡಿ ಅವನ್ನು ಉಚಿತವಾಗಿ ನೋಡುವಂತೆ ಮಾಡಿದ್ದ. ಒಂದೇ ವರ್ಷದಲ್ಲಿ ಈತನ ತಿಂಗಳ ಆದಾಯ ಐದು ಲಕ್ಷದಿಂದ ಮೂವತ್ತು ಲಕ್ಷ ತಲುಪಿತ್ತು.

ಹೈದರಾಬಾದ್, ವೈಜಾಗ್ ಇನ್ನೂ ಕೆಲವೆಡೆ ಕೆಲವು ಪ್ರಾಪರ್ಟಿಗಳನ್ನು ಖರೀದಿ ಮಾಡಿದ್ದ. 2021ರಲ್ಲಿ ಪತ್ನಿಗೆ ವಿಚ್ಛೇದನವನ್ನೂ ನೀಡಿದ. ಭಾರತದಲ್ಲಿ ಪೈರಸಿ ಅಪರಾಧವಾದ ಕಾರಣ, 2022 ರಲ್ಲಿ ಭಾರತದ ನಾಗರೀಕತೆಯನ್ನು ತ್ಯಜಿಸಿ ಕೆರೆಬಿಯನ್ ದ್ವೀಪವೊಂದರ ನಾಗರೀಕತೆ ಪಡೆದು ಅಲ್ಲಿಗೆ ತೆರಳಿದ. ಆದರೆ ಆತ ನೆದರ್ಲ್ಯಾಂಡ್, ಥಾಯ್ಲೆಂಡ್, ಮಲೇಷಿಯಾ, ಸ್ವಿಟ್ಜರ್ಲ್ಯಾಂಡ್, ಅಮೆರಿಕ, ದುಬೈ ಹೀಗೆ ನಾನಾ ಕಡೆಗಳಲ್ಲಿ ಓಡಾಡುತ್ತಿರುತ್ತಿದ್ದ. ನೆದರ್ಲ್ಯಾಂಡ್ ಮತ್ತು ಸ್ವಿಟ್ಜರ್ಲ್ಯಾಂಡ್ಗಳಲ್ಲಿ ಸರ್ವರ್ಗಳನ್ನು ಖರೀದಿಸಿ ಅಲ್ಲಿಂದಲೇ ವೆಬ್ಸೈಟ್ ರನ್ ಮಾಡುತ್ತಿದ್ದ. ಜೊತೆಗೆ ಸರ್ವರ್ಗಳನ್ನು ಹ್ಯಾಕ್ ಮಾಡಿ ಹೊಸ ಸಿನಿಮಾಗಳನ್ನೇ ಕದ್ದು ವೆಬ್ಸೈಟ್ನಲ್ಲಿ ಹಂಚಿಕೊಳ್ಳಲು ಸಹ ಆರಂಭಿಸಿದ್ದ.

ಕೆಲವು ನಕಲಿ ಜಾಹೀರಾತು ಕಂಪೆನಿಗಳನ್ನು ಸೃಷ್ಟಿಸಿ, ಐಬೊಮ್ಮ ಹಾಗೂ ಅದರ ಜೊತೆಗೆ ಆತ ಸೃಷ್ಟಿಸಿದ್ದ ಇನ್ನೂ ಕೆಲವು ಪೈರಸಿ ವೆಬ್ಸೈಟ್ಗಳ ವೀವರ್ಶಿಪ್ ಅನ್ನು ನಕಲಿ ಕಂಪೆನಿಗೆ ಚಾನೆಲ್ ಮಾಡಿ ಅದನ್ನು ಗೂಗಲ್ಗೆ ಸಬ್ಮಿಟ್ ಮಾಡಿ ಅಲ್ಲಿಂದಲೂ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದ. ಅದರ ಜೊತೆಗೆ ಸ್ಥಳೀಯವಾಗಿದ್ದ ಕೆಲವು ಪೈರಸಿ ವೆಬ್ಸೈಟ್ಗಳ ಜೊತೆಗೆ ಟೈಪ್ ಸಹ ಮಾಡಿಕೊಂಡಿದ್ದ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾದ ಸಿನಿಮಾಗಳ ಸ್ಕ್ರೀನ್ ರೆಕಾರ್ಡ್ಗಳನ್ನು ಖರೀದಿಸಿ ಅಪ್ಲೋಡ್ ಮಾಡುತ್ತಿದ್ದ.

ಇತ್ತೀಚೆಗೆ ಪೊಲೀಸರು ಐಬೊಮ್ಮ ಜೊತೆಗೆ ಸಂಪರ್ಕ ಹೊಂದಿದ್ದ ಕೆಲ ಬೇರೆ ಪೈರಸಿ ವೆಬ್ಸೈಟ್ಗಳವರನ್ನು ಬಂಧಸಿದ್ದರು. ಆಗ ರವಿ, ಐಬೊಮ್ಮ ರವಿ ತನ್ನ ವೆಬ್ಸೈಟ್ನಲ್ಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ ನೀಡಿದ್ದ. ಆ ಸಂದೇಶದಲ್ಲಿ ತನ್ನ ಬಳಿ 5 ಕೋಟಿಗೂ ಹೆಚ್ಚು ಬಳಕೆದಾರರ ಮಾಹಿತಿ ಇರುವುದಾಗಿ ಹೇಳಿದ್ದ. ಆದರೆ ರವಿ ತನ್ನ ವೆಬ್ಸೈಟ್ ಐಪಿ ಅಡ್ರೆಸ್ ಮಾಕ್ ಮಾಡಿರುತ್ತಿದ್ದನಾದ್ದರಿಂದ ಪೊಲೀಸರಿಗೆ ಆತನ ಸುಳಿವು ಸಿಕ್ಕಿರಲ್ಲ. ಆದರೆ ಐಬೊಮ್ಮ ರವಿಯ ಜೊತೆಗೆ ಸಂಪರ್ಕದಲ್ಲಿ ಇದ್ದ ಕೆಲವರು ನೀಡಿದ ಆಧಾರದ ಮೇಲೆ ಪೊಲೀಸರು ರವಿಯ ಚಲನ-ವಲನಗಳ ಮೇಲೆ ನಿಗಾ ಇರಿಸಿದ್ದರು.

ಹೈದರಾಬಾದ್, ವೈಜಾಗ್ಗಳಲ್ಲಿ ಆಸ್ತಿ ಹೊಂದಿದ್ದ ರವಿ ಅವುಗಳನ್ನು ಮಾರಾಟ ಮಾಡಲೆಂದು ನವೆಂಬರ್ 15 ರಂದು ಹೈದರಾಬಾದ್ಗೆ ಬಂದಿದ್ದ. ಇಲ್ಲಿನ ಕುಕ್ಕಟಪಲ್ಲಿಯಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ಬಂದು ನೆಲೆಸಿದ್ದ. ಆತ ಬಂದಿದ್ದು ಖಾತ್ರಿ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದರು. ಆತನನ್ನು ವಿಚಾರಣೆಗಾಗಿ ಸೈಬರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಇದೀಗ ಜನ ರವಿ ಪರವಾಗಿ ನಿಂತಿದ್ದಾರೆ. ಹೆಚ್ಚಾಗಿರುವ ಟಿಕೆಟ್ ದರಗಳ ನಡುವೆ ರವಿ ತಮಗೆ ಉಚಿತವಾಗಿ ಮನರಂಜನೆ ಒದಗಿಸುತ್ತಿದ್ದ ಎಂದಿದ್ದಾರೆ. ಕೆಲವರಂತೂ ರವಿಯನ್ನು ದೇವರು ಎಂದೆಲ್ಲ ಕರೆದಿದ್ದಾರೆ. ಕೆಲ ವಕೀಲರು, ತಾವು ರವಿಯನ್ನು ಹೊರಗೆ ತಂದೇ ಸಿದ್ದ ಎಂದಿದ್ದಾರೆ. ರವಿಯ ಪ್ರಕರಣ ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ.


Share with

Leave a Reply

Your email address will not be published. Required fields are marked *