
‘ಪುಷ್ಪ 2’ ಪ್ರೀಮಿಯರ್ ವೇಳೆ ಹೈದರಾಬಾದ್ನ ಸಂಧ್ಯಾ ಥಿಯೇಟರ್ ಬಳಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ನಿಧನ ಹೊಂದಿದ್ದಳು. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಕೂಡ ಆರೋಪಿ ಆಗಿದ್ದು, ಅವರಿಗೆ ಸಂಕಷ್ಟ ಹೆಚ್ಚುತ್ತಿದೆ. ಅಲ್ಲು ಅರ್ಜುನ್ ಅವರನ್ನು ಇಂದು (ಡಿಸೆಂಬರ್ 13) ಮುಂಜಾನೆ ಬಂಧಿಸಿದ್ದು ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಈ ಬೆನ್ನಲ್ಲೇ ಅವರನ್ನು ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಅವರನ್ನು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ನಾಂಪಲ್ಲಿ ಕೋರ್ಟ್ ಆದೇಶ ನೀಡಿದೆ. ‘ಪುಷ್ಪ 2’ ಗೆಲುವಿನ ಖುಷಿಯಲ್ಲಿ ಇದ್ದ ಅವರು, ಈಗ ಜೈಲು ಪಾಲಾಗಿದ್ದಾರೆ.

ಅಲ್ಲು ಅರ್ಜುನ್ ಅವರಿಗೆ ನ್ಯಾಯಾಂಗ ಬಂಧನ ಒದಗಿಸಿರುವುದು ಕೆಳ ಹಂತದ ಕೋರ್ಟ್. ಅವರು ಈಗಾಗಲೇ ತಮ್ಮ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಂದೊಮ್ಮೆ ಹೈಕೋರ್ಟ್ ಈ ಪ್ರಕರಣಕ್ಕೆ ತಡೆ ನೀಡಿದರೆ ಅಲ್ಲು ಅರ್ಜುನ್ ಅವರಿಗೆ ಬಿಗ್ ರಿಲೀಫ್ ಸಿಗಲಿದೆ.




