ಯಾದಗಿರಿ, ಅಕ್ಟೋಬರ್ 15: ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಅನ್ನಭಾಗ್ಯ (Anna Bhagya) ಅಕ್ಕಿ ಅಕ್ರಮ ದಂಧೆಗೆ ಹೊಸ ತಿರುವು ಸಿಕ್ಕಿದೆ. ಸಿಐಡಿ ಅಧಿಕಾರಿಗಳು ಹತ್ತಿ ಮಿಲ್ನ ಗೋದಾಮಿನಲ್ಲಿ ಸುಮಾರು 5 ಟನ್ ಪಡಿತರ ಅಕ್ಕಿ ದಾಸ್ತಾನು ಪತ್ತೆ ಮಾಡಿದ್ದಾರೆ. ಇದರಿಂದ ಅಕ್ರಮ ಅಕ್ಕಿ ದಂಧೆಯ ಮತ್ತೊಂದು ಕರಾಳ ಮುಖ ಬಯಲಾಗಿದೆ.
ಗುರುಮಠಕಲ್ ರೈಸ್ಮಿಲ್ ಭೇಟಿ ನೀಡಿದ್ದ ಸಿಐಡಿ ತಂಡ
ಹಿಂದಿನ ತಿಂಗಳು ಗುರುಮಠಕಲ್ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀ ಬಾಲಾಜಿ ರೈಸ್ಮಿಲ್ಗಳಲ್ಲಿ 1.21 ಕೋಟಿ ರೂ. ಮೌಲ್ಯದ 3,985 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ತಂಡ ತನಿಖೆಗಾಗಿ ಸ್ಥಳಕ್ಕೆ ತೆರಳಿತ್ತು. ಪರಿಶೀಲನೆ ವೇಳೆ ಲಕ್ಷ್ಮೀ ತಿಮ್ಮಪ್ಪ ಕಾಟನ್ ಮಿಲ್ನ ಗೋದಾಮಿನೊಳಗೆ ಶಂಕಾಸ್ಪದ ಚೀಲಗಳನ್ನು ಕಂಡು ಒಳನುಗ್ಗಿದ್ದ ತಂಡ, ಅಲ್ಲಿ ಪಡಿತರ ಅಕ್ಕಿಯ ಗೋಣಿ ಚೀಲಗಳನ್ನು ಪತ್ತೆಹಚ್ಚಿದೆ.
ಕಳ್ಳಸಾಗಣೆದಾರರು ರೈಸ್ ಮಿಲ್ಗಳಲ್ಲಿ ದಾಳಿ ನಡೆಯಬಹುದು ಎಂಬ ಭೀತಿಯಿಂದ, ಹತ್ತಿ ಮಿಲ್ಗಳ ಗೋದಾಮುಗಳಲ್ಲಿ ಅಕ್ಕಿ ಅಡಗಿಸಿಟ್ಟಿದ್ದರೆಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.





