ಬೆಂಗಳೂರು: ಯುವತಿ ವಿಚಾರಕ್ಕೆ ಇಬ್ಬರು ಯುವಕರು ನಡು ರಸ್ತೆಯಲ್ಲೇ ಪರಸ್ಪರ ಹೊಡೆದಾಡಿ ಕೊಂಡಿರುವ ಘಟನೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹಲ್ಲೆಯ ವಿಡಿಯೋ ವೈರಲ್ ಆಗಿದೆ.

ಸೈಯದ್ ಅಜರುದ್ದೀನ್ ಹಾಗೂ ಸಹಾಯಕ ಸಬ್ ಇನ್ಸ್ಪೆಕ್ಟರ್ ಪುತ್ರ ಅರ್ಮಾನ್ ಹೊಡೆದಾಡಿಕೊಂಡವರು. ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಾಗಿದೆ. ಅರ್ಮಾನ್ ಸಂಬಂಧಿ ಯುವತಿ ಜತೆ ಅಜರುದ್ದೀನ್ ಹೆಚ್ಚು ಮಾತನಾಡುತ್ತಿದ್ದ. ಅದಕ್ಕೆ ಕೋಪಗೊಂಡ ಅರ್ಮಾನ್, ಅಜರುದ್ದೀನ್ ಜತೆ ಜಗಳ ಮಾಡಿದ್ದಾನೆ. ಗುರುವಾರ ಬೆಳಗ್ಗೆ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಪರಸ್ಪರ ಇಬ್ಬರು ಹೊಡೆದಾಡಿ ಕೊಂಡಿದ್ದು, ಇಬ್ಬರಿಗೂ ರಕ್ತಸಿಕ್ತ ಗಾಯಗಳಾಗಿವೆ. ಬಳಿಕ ಸ್ಥಳೀಯರು ಬಂದು ಜಗಳ ಬಿಡಿಸಿ ಕಳುಹಿಸಿದ್ದಾರೆ. ಈ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಘಟನೆ ಸಂಬಂಧ ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.




