ವಾರಾಣಸಿ: ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು (Emergency Door) ಎರಡು ಬಾರಿ ತೆರೆಯಲು ಯತ್ನಿಸಿದ ಆರೋಪದ ಮೇಲೆ ಬೆಂಗಳೂರಿನಿಂದ ಬಂದಿದ್ದ ಯುವಕನೊಬ್ಬನನ್ನು ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅದ್ವಾನ್ ಎಂದು ಗುರುತಿಸಲಾಗಿದೆ. ಈತ ಶನಿವಾರ ರಾತ್ರಿ ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ‘ಇಂಡಿಗೋ’ (6E 185) ವಿಮಾನದ ಪ್ರಯಾಣಿಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ
ಮೊದಲ ಯತ್ನ: ವಿಮಾನವು ಬೆಂಗಳೂರಿನಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅದ್ನಾನ್ ಏಕಾಏಕಿ ವಿಮಾನದ ಬಾಗಿಲು ತೆರೆಯಲು ಮುಂದಾಗಿದ್ದಾನೆ. ಇದನ್ನು ಕಂಡು ಬೆಚ್ಚಿಬಿದ್ದ ವಿಮಾನದ ಸಿಬ್ಬಂದಿ ಕೂಡಲೇ ಆತನನ್ನು ತಡೆದು, ಸಮಾಧಾನಪಡಿಸಿ ಸೀಟಿನಲ್ಲಿ ಕುಳ್ಳಿರಿಸಿದ್ದರು.
ಎರಡನೇ ಯತ್ನ: ವಿಮಾನವು ವಾರಾಣಸಿಯಲ್ಲಿ ಲ್ಯಾಂಡ್ ಆದ ತಕ್ಷಣ, ಮತ್ತೊಮ್ಮೆ ಬಾಗಿಲು ತೆರೆಯಲು ಆತ ಧಾವಿಸಿದ್ದಾನೆ. ಈ ವೇಳೆ ಸಿಬ್ಬಂದಿ ಆತನನ್ನು ಹಿಡಿದು ನಿಯಂತ್ರಿಸಿದ್ದಾರೆ.




