
ದೆಹಲಿ, ಡಿಸೆಂಬರ್ 15: ವಿಶ್ವವಿಖ್ಯಾತ ತಬಲ ಮಾಂತ್ರಿಕ (73) ಜಾಕೀರ್ ಹುಸೇನ್ (Zakir Hussain) ನಿಧನರಾಗಿದ್ದಾರೆ. ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜಾಕೀರ್ ಹುಸೇನ್ ಅವರು ಭಾನುವಾರ ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ. ಜಾಕೀರ್ ಹುಸೇನ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿರುವ ಜಾಕೀರ್ ಹುಸೇನ್, ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾರವರ ಹಿರಿಯ ಪುತ್ರ. ಭಾರತ ಸೇರಿದಂತೆ ವಿಶ್ವದಾದ್ಯಂತ ತಬಲಾ ವಾದನ ಪ್ರಖ್ಯಾತಿಗಳಿಸಿದ್ದರು. ಜೊತೆಗೆ ಪ್ರಮುಖ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.
ಪ್ರಶಸ್ತಿಗಳು
ಜಾಕೀರ್ ಹುಸೇನ್ ಅವರು ತಮ್ಮ ವೃತ್ತಿಜೀವನದಲ್ಲಿ 3 ಗ್ರಾಮಿ ಪ್ರಶಸ್ತಿ ಪಡೆದಿದ್ದರು. 66ನೇ ಗ್ರಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 3 ಪ್ರಶಸ್ತಿ ಪಡೆದಿದ್ದರು. ಅಷ್ಟೇ ಅಲ್ಲದೆ 1988ರಲ್ಲಿ ಪದ್ಮಶ್ರೀ ಪ್ರಶಸ್ತಿ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.