
ಬೆಂಗಳೂರು, ಮೇ 26: ವ್ಯಕ್ತಿಯೊಬ್ಬ ಮದ್ಯಪಾನ (Drunk and Drive) ಮಾಡಿದ ಮತ್ತಿನಲ್ಲಿ ಒನ್ ವೇಯಲ್ಲಿ ಕಾರು ನುಗ್ಗಿಸಿ ಹಲವು ವಾಹನಗಳಿಗೆ ಹಾನಿ ಉಂಟು ಮಾಡಿದ್ದಲ್ಲದೆ, ತಡೆಯಲು ಬಂದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾನೆ. ಬೆಂಗಳೂರಿನ ಕೋರಮಂಗಲದ (Koramangal) ಜ್ಯೋತಿ ನಿವಾಸ ಕಾಲೇಜು ಬಳಿ ಶನಿವಾರ ತಡರಾತ್ರಿ ಘಟನೆ ಸಂಭವಿಸಿದೆ. ಆರೋಪಿ ನಂದಕೃಷ್ಣ ಎಂಬಾತ ಪೊಲೀಸ್ ಬ್ಯಾರುಕೇಡ್ಗೆ ಕಾರು ಗುದ್ದಿಸಿದ್ದಾನೆ. ಇದರಿಂದಾಗಿ ಪೊಲೀಸರೊಬ್ಬರ ಕಾಲಿಗೆ ಗಾಯವಾಗಿದೆ. ನಂತರ ಕಾರಿನ ಬಾಗಿಲು ತೆರೆಯುವಂತೆ ಪೊಲೀಸರು ಸೂಚನೆ ನೀಡಿದರೂ ನಂದಕೃಷ್ಣ ಪ್ರತಿಕ್ರಿಯಿಸುತ್ತಲೇ ಇರಲಿಲ್ಲ. ಹೀಗಾಗಿ ಪೊಲೀಸರೇ ಕಾರಿನ ಗಾಜು ಒಡೆದು ಆತನನ್ನು ಹೊರಗೆ ಎಳೆದು ತೆಗೆದಿದ್ದಾರೆ. ಇದೇ ವೇಳೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎನ್ನಲಾಗಿದೆ.

ಸದ್ಯ, ಘಟನೆ ಸಂಬಂಧ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣ ಸಾಮಾಜಿಕ ಮಾಧ್ಯಮಗಳಲ್ಲಿಯೂ ಈಗ ಭಾರಿ ಸದ್ದು ಮಾಡುತ್ತಿದೆ. ಪೊಲೀಸರು ಕಾರಿನ ಗಾಜು ಒಡೆದು ನಂದಕೃಷ್ಣನನ್ನು ಹೊರತೆಗೆಯುತ್ತಿರುವ ವಿಡಿಯೋವನ್ನು ‘ಕರ್ನಾಟಕ ಪೋರ್ಟ್ಫೊಲಿಯೋ’ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ತಡರಾತ್ರಿ ಪಾರ್ಟಿಯಿಂದ ಹಿಂತಿರುಗುತ್ತಿದ್ದಾಗ ಅತಿಯಾದ ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ವಾಹನದ ನಿಯಂತ್ರಣ ಕಳೆದುಕೊಂಡು ಅತಿ ವೇಗದಲ್ಲಿ ಪೊಲೀಸ್ ಬ್ಯಾರಿಕೇಡ್ಗಳಿಗೆ ಡಿಕ್ಕಿ ಹೊಡೆಸಿ ಕಾರನ್ನು ನುಗ್ಗಿಸಿದ್ದಾನೆ ಎಂದು ವರದಿಯಾಗಿದೆ. ಚಾಲಕ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿ ವಹಿಸಲಿಲ್ಲ. ರಸ್ತೆಯಲ್ಲಿ ಹಲವಾರು ವಾಹನಗಳಿಗೆ ಕಾರು ಡಿಕ್ಕಿಹೊಡೆಸಿದ್ದಾನೆ. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಕಾರು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ನೇರವಾಗಿ ಡಿಕ್ಕಿ ಹೊಡೆದು ಗಂಭೀರ ಗಾಯಗಳಿಗೆ ಒಳಗಾದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ಚಾಲಕ ವಿಪರೀತ ಮದ್ಯಪಾನ ಮಾಡಿದ್ದ ಮತ್ತು ಅವನಿಗೆ ಸುತ್ತಮುತ್ತಲಿನ ಪ್ರಜ್ಞೆಯೇ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಾನಿಗೊಳಗಾದ ವಾಹನಗಳು, ಗಾಯಗೊಂಡ ನಾಗರಿಕರು ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದರು’’ ಎಂದು ‘ಕರ್ನಾಟಕ ಪೋರ್ಟ್ಫೊಲಿಯೋ’ ಎಕ್ಸ್ ತಾಣದಲ್ಲಿ ಉಲ್ಲೇಖಿಸಲಾಗಿದೆ.




