ಉತ್ತರಪ್ರದೇಶ: ರಾಷ್ಟ್ರಗೀತೆಯ ಚರ್ಚೆಯ ನಡುವೆಯೇ, ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯಾದ್ಯಂತ ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಿ ಆದೇಶಿಸಿದ ಅವರು ವಂದೇ ಮಾತರಂ ಕೇವಲ ಹಾಡಲ್ಲ, ಅದು ಭಾರತದ ಏಕತೆ ಮತ್ತು ಸಮಗ್ರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರಗೀತೆ ವಂದೇ ಮಾತರಂನ 150 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗೋರಖ್ಪುರದಲ್ಲಿ ಆಯೋಜಿಸಲಾದ ಏಕತಾ ಯಾತ್ರೆಯ ಸಂದರ್ಭದಲ್ಲಿ ಸಿಎಂ ಯೋಗಿ ಈ ಘೋಷಣೆ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ವಂದೇ ಮಾತರಂ ಕೇವಲ ಹಾಡಲ್ಲ. ಇದು ಭಾರತದ ಏಕತೆ ಮತ್ತು ಸಮಗ್ರತೆಯನ್ನು ಪ್ರತಿಬಿಂಬಿಸುತ್ತದೆ. ಇದು ರಾಷ್ಟ್ರೀಯ ಏಕತೆಯ ಸಂದೇಶವನ್ನು ನೀಡುತ್ತದೆ. “ರಾಷ್ಟ್ರೀಯ ಗೀತೆ ಬಗ್ಗೆ ಗೌರವ ಭಾವನೆ ಇರಬೇಕು. ಉತ್ತರ ಪ್ರದೇಶದ ಪ್ರತಿಯೊಂದು ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸುತ್ತೇವೆ” ಎಂದು ಆದಿತ್ಯನಾಥ್ ಸಭೆಯನ್ನುದ್ದೇಶಿಸಿ ಹೇಳಿದರು.
ವಂದೇ ಮಾತರಂ ಅನ್ನು ವಿರೋಧಿಸುವವರ ಮೇಲೆ ದಾಳಿ ಮಾಡಿದ ಯೋಗಿ, “ದೇಶದ ಸಮಗ್ರತೆಗೆ ಹಾನಿ ಮಾಡಲು ಜಿನ್ನಾ ಹುಟ್ಟಿದ್ದರೆ, ಅವರನ್ನು ಸಮಾಧಿ ಮಾಡಲಾಗುತ್ತದೆ. ದೇಶವನ್ನು ಮತ್ತೆ ವಿಭಜಿಸಲು ಬಿಡದಂತೆ ನಾವು ಜಾಗರೂಕರಾಗಿರಬೇಕು. ಇಂದು ದೇಶದಲ್ಲಿ ಭಾಷೆ ಮತ್ತು ಜಾತಿಯ ಹೆಸರಿನಲ್ಲಿ ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ಯಾವುದೇ ಧರ್ಮ ಅಥವಾ ನಂಬಿಕೆ ರಾಷ್ಟ್ರಕ್ಕಿಂತ ದೊಡ್ಡದಾಗಲು ಸಾಧ್ಯವಿಲ್ಲ ಎಂದು ಯೋಗಿ ಹೇಳಿದರು.
ರಾಷ್ಟ್ರಗೀತೆಗೆ ಗೌರವ:
1876 ರ ನಂತರ, ವಂದೇ ಮಾತರಂ ಅನ್ನು ವಿರೋಧಿಸಿದ ಯಾವುದೇ ಕ್ರಾಂತಿಕಾರಿ ಇರಲಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ವಿದ್ಯಾರ್ಥಿಗಳು, ಯುವಕರು ಮತ್ತು ಮಕ್ಕಳು ಸೇರಿದಂತೆ ಎಲ್ಲರೂ ವಂದೇ ಮಾತರಂ ಗೆ ಗೌರವ ಕೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ವಂದೇ ಮಾತರಂ ಏಕೈಕ ಜೀವನ ಮಂತ್ರವಾಗಿದೆ ಎಂದು ಅವರು ಹೇಳಿದರು.




