ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ

Share with

ರಜತ ಸಂಭ್ರಮದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ.

ಬೆಳ್ತಂಗಡಿ: ಭಾರತದಲ್ಲಿ ಭಕ್ತಿಯ ಬೇರುಗಳು ಹಾಸುಹೊಕ್ಕಾಗಿದ್ದು ಅದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಭಕ್ತಿಗೆ ಮೂಲವೇ ಭಜನೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದಲ್ಲಿ ಒಂದು ವಾರ ಕಾಲ ನಡೆದ ರಜತ ಸಂಭ್ರಮದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ.
ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಬುಧವಾರ ಧರ್ಮಸ್ಥಳದಲ್ಲಿ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಒಂದು ವಾರ ಕಾಲ ನಡೆದ ರಜತ ಸಂಭ್ರಮದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ನಮ್ಮ ದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಭಜನೆ ಹಾಸುಹೊಕ್ಕಾಗಿದ್ದು ಶ್ರದ್ಧಾ-ಭಕ್ತಿಯ ಭಜನೆ ಮೂಲಕ ದೇವರ ಸಾಕ್ಷಾತ್ಕಾರವಾಗುತ್ತದೆ. ಮಹಾರಾಷ್ಟ್ರದಲ್ಲಿ ಸಂತ ತುಕಾರಾಮ ಮೊದಲಾದ ಸಂತರು ಭಜನಾ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡಿದ್ದಾರೆ. ಭೌತಿಕ ಸುಖ-ಭೋಗಕ್ಕಿಂತ ಆಧ್ಯಾತ್ಮಿಕ ಬದುಕೇ ಶ್ರೇಷ್ಠವಾಗಿದ್ದು ಭಜನೆ ಮೂಲಕ ಸುಲಭದಲ್ಲಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಭಜನೆ ಮೂಲಕ ಧರ್ಮಜಾಗೃತಿಯಾಗಿ ನೈತಿಕಮೌಲ್ಯಗಳು ಉದ್ದೀಪನಗೊಂಡು ಆರೋಗ್ಯ ಪೂರ್ಣ ಸಮಾಜ ರೂಪುಗೊಳ್ಳುತ್ತದೆ ಎಂದು ಸ್ವಾಮೀಜಿ ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಬಹುಮುಖಿ ಸಮಾಜ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದ ಸ್ವಾಮೀಜಿ, ಹೆಗ್ಗಡೆಯವರು ಭಜನಾ ತರಬೇತಿ ಕಮ್ಮಟದ ಮೂಲಕ ಸಾಮೂಹಿಕ ಭಕ್ತಿ ಕ್ರಾಂತಿಯನ್ನೆ ಮಾಡಿದ್ದಾರೆ. ಅನ್ನದಾಸೋಹ, ಜ್ಞಾನದಾಸೋಹ, ಆರೋಗ್ಯ, ಶಿಕ್ಷಣ ಮತ್ತು ಗ್ರಾಮಾಭಿವೃದ್ಧಿ ಕ್ಷೇತ್ರದಲ್ಲಿ ಸೇವೆಯನ್ನು ಶ್ಲಾಘಿಸಿದ ಸ್ವಾಮೀಜಿ ಹೆಗ್ಗಡೆಯವರು ಧರ್ಮಸ್ಥಳಕ್ಕೆ ಮಾತ್ರವಲ್ಲ ಎಲ್ಲಾ ಮಠಾಧೀಶರುಗಳಿಗೂ ಧರ್ಮಾಧಿಕಾರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಇಳೈಯರಾಜ ಶುಭಾಶಂಸನೆ ಮಾಡಿ, ಧರ್ಮಸ್ಥಳ ಕ್ಷೇತ್ರದ ಮಹಿಮೆ ಅದ್ಭುತವಾಗಿದ್ದು ಮಾತಿನಿಂದ ವರ್ಣಿಸಲು ಸಾಧ್ಯವಿಲ್ಲ. ಇಲ್ಲಿಗೆ ಬಂದು ತಾನು ಅತೀವ ಸಂತಸಪಟ್ಟಿದ್ದೇನೆ ಎಂದರು.

ಅವರು ಸುಶ್ರಾವ್ಯವಾಗಿ “ಆನಂದ ಕಂಡೆ ನಾನಿಂದು”ಎಂಬ ಭಕ್ತಿಗೀತೆಯನ್ನು ಹಾಡುವ ಮೂಲಕವೇ ಮನದಾಳವನ್ನು ಮುಂದಿಟ್ಟರು. ತಾನು ಕೊಲ್ಲೂರಿನ ಪರಮಭಕ್ತನಾಗಿದ್ದು, ಇಲ್ಲಿ ಬಂದಾಗಲೂ ಅದೇ ರಾಗದ ಅದೇ ಹಾಡನ್ನು ಇಲ್ಲಿಯೂ ಹಾಡಲು ಅಭಿಮಾನಪಡುತ್ತೇನೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ, ಸನಾತನ ಪರಂಪರೆಯ ಶಕ್ತಿಯ ಸಾಧನಗಳಲ್ಲಿ ಭಜನೆಯೂ ಒಂದು. ಭಜನೆಯಿಂದ ಸಾತ್ವಿಕ ಸಮಾಜ ನಿರ್ಮಾಣವಾಗುತ್ತದೆ. ಕಲಿಯುಗದಲ್ಲಿ ಭಜನೆ ಮಾಡುವುದರಿಂದ ಭಗವಂತನೊಂದಿಗೆ ನೇರವಾಗಿ ಅನುಸಂಧಾನ ಸಾಧ್ಯವಾಗುತ್ತದೆ. ಇಲ್ಲಿ ತರಬೇತಿ ಪಡೆದವರು ಭಜನೆಯ ರಾಯಭಾರಿಗಳು ಎಂದರು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ ಭಜನಾ ತರಬೇತಿ ಮೂಲಕ ಹೆಗ್ಗಡೆಯವರು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ರೂವಾರಿಯಾಗಿದ್ದಾರೆ. ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ಹೆಗ್ಗಡೆಯವರು ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ನಾಯಕತ್ವ ಗುಣ ಬೆಳೆಸಿಕೊಂಡು ಆಯಾ ಊರಿನ ಪ್ರಗತಿಯ ರೂವಾರಿಗಳಾಗಬೇಕು. ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಪ್ರಜ್ಞಾವಂತ ನಾಗರಿಕರಾಗಿ, ಪ್ರಗತಿಶೀಲ ಚಿಂತನೆಯೊಂದಿಗೆ ಸಮಾಜದಲ್ಲಿ ಸುಖ-ಶಾಂತಿ, ಸಾಮರಸ್ಯ, ಸೌಹಾರ್ದತೆ ನೆಲೆಸುವಂತೆ ಮಾಡಬೇಕು. ದುಶ್ಚಟಮುಕ್ತ ಸಮಾಜ ರೂಪಿಸಿ, ಮಾನವೀಯತೆಯೊಂದಿಗೆ ಎಲ್ಲರ ಮನೆ ಮತ್ತು ಮನ ಬೆಳಗಲಿ ಎಂದು ಹೆಗ್ಗಡೆಯವರು ಹಾರೈಸಿದರು. ಪುಲಿಯಾರು ಸಿದ್ಧಪ್ಪ ಅಯ್ಯಪ್ಪ ಸ್ವಾಮೀಜಿ ಮತ್ತು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಸಾಹಿತಿ ಹಿರೇಮಗಳೂರು ಕಣ್ಣನ್, ಪ್ರದೀಪಕುಮಾರ್ ಕಲ್ಕೂರ ಇದ್ದರು.

ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪಂಜ , ಉದ್ಯಮಿ ಅನಂತರಾಮಯ್ಯ ಉಪಸ್ಥಿತರಿದ್ದರು. ಕಮ್ಮಟದಲ್ಲಿ ತರಬೇತಿ ಪಡೆದ ಮಹಿಳೆಯರಿಂದ ದೃಶ್ಯ ರೂಪಕ ಹಾಗೂ ಪುರುಷರಿಂದ ನೃತ್ಯಭಜನಾ ಪ್ರಾತ್ಯಕ್ಷಿಕೆ ಆಕರ್ಷಕವಾಗಿ ಮೂಡಿ ಬಂತು.

ಭಜನಾ ತರಬೇತಿ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಮೋಯಿಲಿ ವರದಿ ವಾಚಿಸಿದರು. ಪಿ.ಕೆ.ಪುರುಷೋತ್ತಮ ವಂದಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.


Share with

Leave a Reply

Your email address will not be published. Required fields are marked *